ಮಂಜೇಶ್ವರದಾದ್ಯಂತ ಭಕ್ತಿ ಸಡಗರದಿಂದ ನಡೆದ ಶ್ರಾವಣ ಮಾಸದ ನಾಗರ ಪಂಚಮಿ ಆಚರಣೆ.
ಆಗಸ್ಟ್ 09, 2024
0
ಮಂಜೇಶ್ವರದಾದ್ಯಂತ ಭಕ್ತಿ ಸಡಗರದಿಂದ ನಡೆದ ಶ್ರಾವಣ ಮಾಸದ ನಾಗರ ಪಂಚಮಿ ಆಚರಣೆ.
ಮಂಜೇಶ್ವರ: ಪ್ರಕೃತಿ ಸಾಮೀಪ್ಯದ ಆಚರಣೆ ಎಂದೇ ಕರೆಸಿಕೊಳ್ಳುವ "ನಾಗರ ಪಂಚಮಿ" ಹಬ್ಬ, ಆಚರಣೆಗಳ ಮೊದಲ ಪರ್ವವೆಂದೇ ಕರೆಸಿಕೊಳ್ಳುತ್ತದೆ. ತುಳುನಾಡಿನಲ್ಲಿ ಹಿಂದಿನಿಂದಲೂ ನಾಗ ದೇವರ ಆರಾಧನೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಗೆ ಗರುಡಪಂಚಮಿ ಮತ್ತು ನಾಗರ ಪಂಚಮಿ ಎಂದು ಹೆಸರಿದೆ. ನಾಗರ ಪಂಚಮಿಯಂದು ಅಕ್ಕಿ, ತೆಂಗಿನಕಾಯಿ ಇಟ್ಟು ನಾಗರ ಕಲ್ಲಿಗೆ ಪಂಚಾಮೃತ ಅಭಿಷೇಕ ಮಾಡಿ ಆರಾಧಿಸುವ ಸಂಪ್ರದಾಯವಿದೆ. ನಾಗರಪಂಚಮಿ ಪ್ರಯುಕ್ತ ಮಂಜೇಶ್ವರದ ಧಾರ್ಮಿಕ ಶ್ರದ್ಧಾ ಕೇಂದ್ರವಾದ, 18 ಪೇಟೆಗಳ ಕ್ಷೇತ್ರವೆಂದೇ ಖ್ಯಾತಿ ಪಡೆದ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ, ಶ್ರೀ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಕೃತಾರ್ಥರಾದರು. ಇಂದು ಬೆಳಗ್ಗೆ ಕ್ಷೇತ್ರದ ಮುಂಭಾಗವಿರುವ ನಾಗನ ಸುತ್ತು ಕಟ್ಟೆಯಲ್ಲಿ ನಾಗನ ಪೂಜೆ ಆರಂಭಗೊಂಡು ನಾಗ ದೇವರಿಗೆ ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, ಹಾಲಾಭಿಷೇಕ, ನಾಗ ತಂಬಿಲ, ಮಹಾಪೂಜೆ ನಡೆಯಿತು. ಕ್ಷೇತ್ರದೊಳಗಡೆ ಇರುವ ಶ್ರೀಮತ್ ಅನಂತೇಶ್ವರ ದೇವರಿಗೆ ಬೆಳಗ್ಗೆ ವಿವಿಧ ಅಭಿಷೇಕಗಳು, ಅಭಿಷೇಕ ಆರತಿ, ಮಧ್ಯಾಹ್ನ ಮಹಾಪೂಜೆ, ಸರ್ಪದ ಮೂಲಸ್ಥಾನದಲ್ಲಿ ವಾಸುಕಿ ಪೂಜೆ, ಸೇವಾದಾರರಿಗೆ ಪ್ರಸಾದ ವಿತರಣೆ ನಡೆಯಿತು. ಇಂದು ನಾಗರ ಪಂಚಮಿಯಂಗವಾಗಿ ವಿಶೇಷವಾಗಿ ಅನ್ನ ಸಂತರ್ಪಣೆ ವಿತರಣೆ ಬೆಳಗ್ಗಿನಿಂದಲೇ ಪ್ರಾರಂಭವಾಗಿತ್ತು, ಸಾವಿರಾರು ಮಂದಿ ಭಕ್ತಾದಿಗಳು ಪ್ರಸಾದ ಭೋಜನ ಸ್ವೀಕರಿಸಿದರು. ಈ ಬಾರಿ ಭಕ್ತಾದಿಗಳಿಗೆ ಮಳೆಯಿಂದ ಯಾವುದೇ ತೊಡಕುಂಟಾಗಬಾರದೆಂಬ ನೆಲೆಯಲ್ಲಿ ಕ್ಷೇತ್ರದ ಆಡಳಿತ ಸಮಿತಿ ನಾಗನ ಕಟ್ಟೆಯ ಸುತ್ತಾ ಚಪ್ಪರ ಹಾಸಿದ್ದರು. ಅಲ್ಲದೇ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳನ್ನು ಕ್ಷೇತ್ರಾಡಳಿತ ಮಂಡಳಿ, ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು. ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ವಾಮನ್ ಶರ್ಮಾ ರವರ ನೇತೃತ್ವದಲ್ಲಿ ಹಲವು ವೈದಿಕರ ಸಹಯೋಗದಿಂದ ನಾಗನ ಸುತ್ತು ಕಟ್ಟೆಯಲ್ಲಿ ಹಾಗೂ ಕ್ಷೇತ್ರದೊಳಗೆ ಪೂಜೆ ಪುನ್ಕಸ್ಕಾರಗಳು ನಡೆದವು. ಅಲ್ಲದೇ ಮಂಜೇಶ್ವರ,
ವರ್ಕಾಡಿ, ಮೀಂಜ ಗ್ರಾ.ಪಂ. ಭಾಗಗಳಲ್ಲಿರುವ ಹಲವು ಕಡೆಗಳಲ್ಲಿರುವ ದೇವಸ್ಥಾನ, ಬನಗಳು, ತರವಾಡು ಮನೆಗಳ ಪರಿದಿಯಲ್ಲಿರುವ ನಾನಾ ನಾಗ ಸನ್ನಿಧಿಗಳಲ್ಲಿ ಶ್ರಾವಣ ಮಾಸದ ನಾಗರ ಪಂಚಮಿ ಆಚರಣೆಗಳು ಶ್ರದ್ಧಾಭಕ್ತಿಯಿಂದ ಜರುಗಿದವು.














