ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಹೃದಯಾಘಾತದಿಂದ ನಿಧನ.
ಜನವರಿ 10, 2025
0
ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಹೃದಯಾಘಾತದಿಂದ ನಿಧನ.
ಮಂಜೇಶ್ವರ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ. ಮೀಯಪದವು ಬಳಿಯ ಬಾಳಿಯೂರು ಪರಂದರಗುರಿ ನಿವಾಸಿ ದಿ. ಪದ್ಮನಾಭ ಪೂಜಾರಿಯವರ ಸುಪುತ್ರ ಪೇಂಟಿಂಗ್ ಕಾರ್ಮಿಕ ಚೇತನ್ ಕುಮಾರ್ (24) ಮೃತಪಟ್ಟ ಯುವಕ. ಡಿಸೆಂಬರ್ 31 ರಂದು ರಾತ್ರಿ ಮಂಗಳೂರಿನಲ್ಲಿ ನಡೆದ ಹೊಸ ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಬೈಕ್ ನಲ್ಲಿ ಮನೆಗೆ ಹಿಂತಿರುಗುತ್ತಿದ್ದ ಮಧ್ಯೆ ಎದುರು ಭಾಗದಿಂದ ಬಂದ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ತಲೆಗೆ ಹಾಗೂ ಮುಖಕ್ಕೆ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದನು. ಆರ್ಥಿಕವಾಗಿ ಸಂಕಷ್ಟದ ಬದುಕಿನಲ್ಲಿ ತನ್ನ ತಾಯಿಯ ಜೊತೆ ಜೀವನ ನಡೆಸುತ್ತಿದ್ದ ಚೇತನ್ ನ ಮುಂದುವರಿದ ಚಿಕಿತ್ಸೆಗಾಗಿ ಚಿಗುರುಪಾದೆ ಯುವಧಾರ ಫ್ರೆಂಡ್ಸ್ ಕ್ಲಬ್ ನ ವತಿಯಿಂದ ನಾಡಿನ ದಾನಿಗಳಿಂದ ಹಣ ಸಂಗ್ರಹ ನಡೆಸಿ, ಸುಮಾರು 75,000 ದಷ್ಟು ಮೊತ್ತವನ್ನು ಸಂಗ್ರಹಿಸಿ, ಚಿಕಿತ್ಸೆಗಾಗಿ ನೀಡಲಾಗಿತ್ತು. ಈ ನಡುವೆ ಉನ್ನತ ಚಿಕಿತ್ಸೆ ಮುಂದುವರಿಯುತ್ತಿದ್ದಂತೆ ಇಂದು ಮುಂಜಾನೆ 1 ಗಂಟೆ ವೇಳೆ ಹೃದಯಾಘಾತಗೊಂಡು ಚೇತನ್ ಮೃತಪಟ್ಟಿದ್ದಾನೆ. ಇದೀಗ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತದೇಹದವಿದ್ದು, ಶವ ಮಹಜರು ನಡೆಸಿದ ಬಳಿಕ ಮನೆಗೆ ತರಲಾಗುವುದು. ಮನೆ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ. ಮೃತಪಟ್ಟ ಚೇತನ್ ಕುಮಾರ್ ಈ ಹಿಂದೆ ಹೊಸಂಗಡಿಯ ಅಂಗಡಿಪದವಿನಲ್ಲಿ ಶೇಂದಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಬಳಿಕ ಊರಿನಲ್ಲಿ ಪೇಂಟಿಂಗ್ ಕಾರ್ಮಿಕನಾಗಿ ದುಡಿಯುತ್ತಿದ್ದನು. ಡಿ.ವೈ. ಎಫ್. ಐ ಯ ಸಂಘಟನೆಯ ಸಕ್ರೀಯ ಕಾರ್ಯಕರ್ತನಾಗಿದ್ದನು. ಅಲ್ಲದೆ ಊರಿನ ಸಾಮಾಜಿಕ ಸಂಘಟನೆಯಾದ ಯುವಧಾರ ಫ್ರೆಂಡ್ಸ್ ಕ್ಲಬ್ ನಲ್ಲಿ ಕೂಡಾ ಸಕ್ರೀಯ ಸದಸ್ಯನಾಗಿದ್ದಾನೆ. ಚೇತನ್ ಕುಮಾರ್ ನ ಅಕಾಲ ನಿಧನಕ್ಕೆ
ಡಿ.ವೈ. ಎಫ್. ಐ ಹಾಗೂ ಯುವಧಾರ ಫ್ರೆಂಡ್ಸ್ ಕ್ಲಬ್ ಗಾಢವಾದ ಸಂತಾಪ ಸೂಚಿಸಿದ್ದಾರೆ.

