ಮಂಜೇಶ್ವರ: ವರ್ಕಾಡಿಯಲ್ಲಿ "ಆಟಿದ ಕೂಟ".
ಆಗಸ್ಟ್ 02, 2024
0
ಮಂಜೇಶ್ವರ: ವರ್ಕಾಡಿಯಲ್ಲಿ "ಆಟಿದ ಕೂಟ".
ಮಂಜೇಶ್ವರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ವರ್ಕಾಡಿ ಒಕ್ಕೂಟದ ನೇತೃತ್ವದಲ್ಲಿ ವರ್ಕಾಡಿ ಕಾಪ್ರಿ ಶಾಲೆಯಲ್ಲಿ ಆಟಿದ ಕೂಟ ನಡೆಯಿತು.
ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆಯಾದ ಪೂರ್ಣಿಮಾ ಎಸ್.ಬೇರಿಂಜ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಯೋಜನಾಧಿಕಾರಿ ಶಶಿಕಲ ಸುವರ್ಣ, ಮೇಲ್ವಿಚಾರಕರಾದ ಕೃಷ್ಣಪ್ಪ ಪೂಜಾರಿ, ಕಾಪ್ರಿ ಶಾಲಾ ಮುಖ್ಯೋಪಧ್ಯಾಯಿನಿ ಸುಜಾತ, ವಲಯಾಧ್ಯಕ್ಷರಾದ ಸೋಮಶೇಖರ್, ಸ್ಥಾಪಕಧ್ಯಕ್ಷ ಭಾಸ್ಕರ ಟೈಲರ್, ಇಸ್ಡೋರ್ ಡಿ.ಸೋಜ, ಪಕ್ಕದ ಒಕ್ಕೂಟಗಳ ಅಧ್ಯಕ್ಷರುಗಳಾದ ಚಂದ್ರಹಾಸ ಶೆಟ್ಟಿ, ದಿನೇಶ್ ಪಾವೂರು, ಆಟಿ ತಿಂಗಳಿನ ಮಹತ್ವದ ಬಗ್ಗೆ ಮಾತನಾಡಿದರು. ಶ್ರೀ ಮಡಿಕತ್ತಾಯ ದೈವಸ್ಥಾನದ ಮೊಕ್ತೇಸರರಾದ
ವಿ.ಎಸ್ ಬೇರಿಂಜರು ಮಾತನಾಡಿ ತುಳು ನಾಡು, ತುಳುವರ ಜೀವನ ಶೈಲಿ, ಸಾಂಪ್ರದಾಯಿಕ ಆಚರಣೆಗಳು, ಪೂರ್ವಜರು ಅನುಭವಿಸಿದ ಆಟಿ ತಿಂಗಳ ಕಷ್ಟ -ಸುಖದ ಜೀವನ ಶೈಲಿ, ತಿಂಡಿ ತಿನಿಸುಗಳ ಬಗ್ಗೆ ವಿಚಾರ ಮಂಡಿಸಿದರು.
ಯೋಜನೆಯ ವರ್ಕಾಡಿ ಒಕ್ಕೂಟದಲ್ಲಿ ಕಳೆದ 12 ವರ್ಷಗಳ ಕಾಲ ಸೇವಾನಿರತರಾಗಿ ದುಡಿದು ಇದೀಗ ನಿವೃತ್ತಿ ಹೊಂದಿರುವ ಫ್ರಾನ್ಸಿಸ್ ಮೊಂತೆರೋ ದಂಪತಿಗಳನ್ನು ಗೌರವಿಸಲಾಯಿತು. ಯೋಜನೆಗೆ
ನೂತನ ಸೇವಾನಿರತೆಯಾಗಿ ನಿಯುಕ್ತಿಗೊಂಡಿರುವ ಶ್ರೀಮತಿ ಮಲ್ಲಿಕರನ್ನು ಸ್ವಾಗತಿಸಲಾಯಿತು. ಯೋಜನೆಯ ಸದಸ್ಯರಿಗೆ ಆಯೋಜಿಸಲ್ಪಟ್ಟ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಕಾರ್ಯಕ್ರಮದ ಸಂದರ್ಭದಲ್ಲಿ ಆಗಮಿಸಿದ ರಾಜ್ಯ ಪ್ರಶಸ್ತಿ ವಿಜೇತ ಐತಪ್ಪ ಮರಿಕಾಪುರವರ ತಂಡದ ಆಟಿಕಳಂಜನನ್ನು ಜನಪದೀಯ ಪಾರ್ದನದ ಮೂಲಕ ಸ್ವಾಗತಿಸಲಾಯಿತು. ಸದಸ್ಯರು ಸ್ವತಹ ಮನೆಯಲ್ಲಿ ತಯಾರಿಸಿ ತಂದ ಆಟಿ ತಿಂಗಳ ತಿಂಡಿ ತಿನಸುಗಳ ಮಧ್ಯಾಹ್ನದ ಸಾಂಪ್ರದಾಯಿಕ ಊಟವನ್ನುಏರ್ಪಡಿಸಲಾಗಿತ್ತು.
ಒಕ್ಕೂಟದ ಮಾಜಿ ಅಧ್ಯಕ್ಷ ರವೀಂದ್ರ ಕುಲಾಲ್ ತನ್ನ ಸ್ವಯಂರಚಿತ ಕವನಗಳೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು. ಒಕ್ಕೂಟದ ಕಾರ್ಯದರ್ಶಿ ರೇಣುಕ, ಪದಾಧಿಕಾರಿಗಳಾದ ಚಂದ್ರಶೇಖರ, ಸುಮಿತ್ರ, ಪದ್ಮಲತ ಉಪಸ್ಥಿರಿದ್ದರು. ಪದಾಧಿಕಾರಿ ಯಾದವ ಬಿ. ವಂದಿಸಿದರು.



