ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಿಂದ ಅಪಹರಿಸಲ್ಪಟ್ಟ ಸೊತ್ತುಗಳನ್ನು ಮುಂದಿನ 15 ದಿವಸಗಳೊಳಗಾಗಿ ಪತ್ತೆಹಚ್ಚಿ ಕಳ್ಳರನ್ನು ಕಾನೂನು ವ್ಯಾಪ್ತಿಯಡಿಗೆ ತಾರದಿದ್ದರೆ ತೀವ್ರ ಹೋರಾಟ: ವೇ.ಮೂ ಬೋಳಂತಕೋಡಿ ರಾಮ ಭಟ್.
ಆಗಸ್ಟ್ 05, 2024
0
ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಿಂದ ಅಪಹರಿಸಲ್ಪಟ್ಟ ಸೊತ್ತುಗಳನ್ನು ಮುಂದಿನ 15 ದಿವಸಗಳೊಳಗಾಗಿ ಪತ್ತೆಹಚ್ಚಿ ಕಳ್ಳರನ್ನು ಕಾನೂನು ವ್ಯಾಪ್ತಿಯಡಿಗೆ ತಾರದಿದ್ದರೆ ತೀವ್ರ ಹೋರಾಟ: ವೇ.ಮೂ ಬೋಳಂತಕೋಡಿ ರಾಮ ಭಟ್.
ಮಂಜೇಶ್ವರ: ಸುಮಾರು 1400 ವರುಷಗಳ ಇತಿಹಾಸವಿರುವ ಸೀಮೆ ದೇವಸ್ಥಾನವೆಂದೇ ಖ್ಯಾತಿ ಪಡೆದಿರುವ ಕೋಳ್ಯೂರು ಶ್ರೀ ಶಂಕರ ನಾರಾಯಣ ದೇವಸ್ಥಾನದಲ್ಲಿ ಕಳವಾದ ಚಿನ್ನ ಬೆಳ್ಳಿಯನ್ನು ಭಕ್ತಾದಿಗಳು ಭರಿಸಿಯಾರು, ಆದರೆ ಕಳವಾದ ಪುರಾತನವಾದ ದೇವರ ಸೊತ್ತುಗಳ ಮೇಲೆ ಭಕ್ತರು ಇಟ್ಟಿರುವ ಭಕ್ತಿವಿಶ್ವಾಸಕ್ಕೆ ಪರಿಹಾರ ಸಿಗದು. ದೇವಸ್ಥಾನದಿಂದ ಅಪಹರಣ ಮಾಡಿದ ಮುಂದಿನ 15 ದಿವಸಗಳೊಳಗೆ ಕಳ್ಳರ ಜಾಡನ್ನು ಪೋಲೀಸರು ಹಿಡಿಯದೇ ಇದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಸೇವಾಸಮಿತಿಯ ಅಧ್ಯಕ್ಷರಾದ ಬೋಳಂತಕೋಡಿ ರಾಮ ಭಟ್ ಅವರು ಎಚ್ಚರಿಕೆ ನೀಡಿದರು.
ಇತ್ತೀಚೆಗೆ ಕೋಳ್ಯೂರು ದೇವಸ್ಥಾನಕ್ಕೆ ಕಳ್ಳರು ಪ್ರವೇಶಿಸಿ ಅಲ್ಲಿದ್ದ ದೇವರ ಚಿನ್ನಾಭರಣಗಳನ್ನು ಹೊತ್ತೊಯ್ದು ದೇವಸ್ಥಾನವನ್ನು ಅಪವಿತ್ರಗೊಳಿಸಿದ ಪ್ರಕರಣವನ್ನು ಪ್ರತಿಭಟಿಸಿ ವರ್ಕಾಡಿ ಸುಂಕದಕಟ್ಟೆಯ ಮಜಿರ್ಪಳ್ಳ ಪೇಟೆಯಲ್ಲಿ ನಿನ್ನೆ ಸಂಜೆ ಖಂಡನಾ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ ರವಿಶಂಕರ ಹೊಳ್ಳರವರು ವಹಿಸಿದ್ದರು. ಸಭೆಯಲ್ಲಿ ಭಾಜಪಾ ಜಿಲ್ಲಾ ಕಾರ್ಯದರ್ಶಿ ವಿಜಯ್ ಕುಮಾರ್ ರೈ ಮಾತನಾಡಿ ದೇವಸ್ಥಾನದಲ್ಲಿ ಸೊತ್ತುಗಳ ಕಳ್ಳತನವಾಗಿರುವುದು ಕಾನೂನು ಸುವ್ಯವಸ್ಥೆಯು ಕುಸಿದಿರುವುದರ ಸೂಚನೆಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಹರ್ಷಾದ್ ವರ್ಕಾಡಿ ಮಾತನಾಡಿ ಕೋಳ್ಯೂರು ಕ್ಷೇತ್ರಕ್ಕೆ
ಆದ ಅಪಚಾರವು ಊರ ಎಲ್ಲಾ ಸಮುದಾಯಗಳಿಗೆ ಮಾಡಿದ ಅಪಚಾರಕ್ಕೆ ಸಮನಾದ ಕೃತ್ಯ ಎಂದರು. ಸಿ.ಪಿ.ಐ.ಎಂ ನ ಮಂಜೇಶ್ವರ ಮಂಡಲ ಏರಿಯಾ ಸೆಕ್ರೆಟರಿ ಕೆ. ಆರ್. ಜಯಾನಂದ ಮಾತನಾಡಿ, ಭಕ್ತರು ದೇವಾಲಯಗಳ ಸಂಪತ್ತನ್ನು ಕಾಪಾಡುವ ಜವಾಬ್ದಾರಿಯನ್ನು ವಹಿಸಬೇಕು ಎಂದರು. ಈ ವೇಳೆ ದೇವಸ್ಥಾನದ ಪವಿತ್ರಪಾಣಿ ರಾಜೇಶ್ ತಾಳಿತ್ತಾಯ, ಮೊಕ್ತೇಸರ ಕೃಷ್ಣಭಟ್ ಚಕ್ರಕೋಡಿ, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ಕೆ. ಪಾವೂರು, ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್. ಶೆಟ್ಟಿ, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ .ಎಸ್, ಭಾಜಪಾ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಸಿಪಿಐ ಪಕ್ಷದ ರಾಮಕೃಷ್ಣ ಕಡಂಬಾರು, ಸಿಪಿಐಎಂ ನ ಬೂಬ .ಡಿ, ಕಾಂಗ್ರೆಸ್ ಪಕ್ಷದ ಪಿ ಸೋಮಪ್ಪ, ಸಂತಡ್ಕ ಶ್ರೀ ಅರಸು ಸಂಕುಲ ದೈವಸ್ಥಾನದ ಡಾ. ಶ್ರೀಧರ ಭಟ್ ಮಾವೆ, ಕಾವಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಮೊಕ್ತೇಸರ ಸುಭಾಸ್ ಅಡಪ, ಕಡಂಬಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರ ಸೂರ್ಯನಾರಾಯಣ ಅಯ್ಯ, ಶ್ರೀಕ್ಷೇತ್ರ ಕಣಂತೂರು ನ ಮೊಕ್ತೇಸರ ದೇವಿಪ್ರಸಾದ್ ಪೊಯ್ಯತ್ತಾಯ, ಗಡಿನಾಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಕ್ಯಾಂಪ್ಕೋ ಸದಸ್ಯ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಣ್ಣೂರು ವಿಭಾಗ ಕಾರ್ಯವಾಹ ಲೋಕೇಶ್ ಜೋಡುಕಲ್ಲು, ಧಾರ್ಮಿಕ ಮುಂದಾಳುಗಳಾದ ಗೋಪಾಲ್ ಶೆಟ್ಟಿ ಅರಿಬೈಲು, ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು,
ಎಸ್.ಕೆ. ಡಿ. ಆರ್.ಡಿ.ಪಿ ತಾಲೂಕು ಯೋಜನಾಧಿಕಾರಿ ಕೃಷ್ಣಪ್ಪ, ಸೋಮನಾಥ ಕಾರಂತ ಮೊದಲಾದವರು ಸಭೆಯನ್ನುದ್ದೇಶಿಸಿ, ಮಾತನಾಡಿದರು. ದೇವಸ್ಥಾನದ ಮೊಕ್ತೇಸರರಾದ ಕೃಷ್ಣಕುಮಾರ್ ಉತ್ತಾರ ಕೊಡಂಗೆ ಸ್ವಾಗತಿಸಿ, ಚಂದ್ರಕುಮಾರ್ ಬಲಿಪಗುಳಿ ವಂದಿಸಿದರು. ಹಿರಿಯ ಪತ್ರಕರ್ತ ಗಣೇಶ್ ಭಟ್ ವಾರಣಾಸಿ ಕಾರ್ಯಕ್ರಮ ನಿರೂಪಿಸಿದರು.








