ಅಂತ್ಯಸಂಸ್ಕಾರದ ಬಳಿಕ ನೀರು ಇಡುವ ಸಂಪ್ರದಾಯ.. ಕಡಿದ ನಾಗರ ಹಾವು ನೀರು ಕುಡಿದು ತೆರಳಿರಬಹುದೆಂಬ ಮಾತು. ಮತ್ತೊಂದು ವಿಸ್ಮಯ ಘಟನೆಗೆ ಸಾಕ್ಷಿಯಾಯಿತು ಕುರುಡಪದವು.
ಜುಲೈ 06, 2024
0
ಕಡಿದ ನಾಗರ ಹಾವು ಅಂತ್ಯಸಂಸ್ಕಾರದ ವಿಧಿಯಲ್ಲಿ ಭಾಗಿ !! ಮತ್ತೊಂದು ವಿಸ್ಮಯ ಘಟನೆಗೆ ಸಾಕ್ಷಿಯಾಯಿತು ಕುರುಡಪದವು.
ಮಂಜೇಶ್ವರ: ನಾಗರ ಹಾವು ಕಡಿತಕ್ಕೊಳಗಾಗಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಮೊನ್ನೆ ನಡೆದಿದ್ದು, ಮೃತರ ಅಂತ್ಯಸಂಸ್ಕಾರದ ವಿಧಿಯ ಕೊನೆಯ ಭಾಗವಾದ ನೀರು ಇಡುವ ಕಾರ್ಯಕ್ರಮವೂ ಮರುದಿನ ರಾತ್ರಿ ನಡೆದಿತ್ತು. ವಿಸ್ಮಯವೆಂದರೆ, ಈ ಕಾರ್ಯಕ್ರಮಕ್ಕೆ ಆಗಮಿಸಿದ ನಾಗರ ಹಾವು ಪಾತ್ರದಲ್ಲಿದ್ದ ನೀರನ್ನು ಕುಡಿದು ತೆರಳಿದೆ ಎನ್ನುವ ಮಾತು ಇದೀಗ ಪರಿಸರದಲ್ಲಿ ಕೇಳಿಬರುತ್ತಿದೆ. ಪೈವಳಿಕೆ ಪಂಚಾಯತ್ ಗೊಳಪಟ್ಟ ಕುರುಡುಪದವು ನಿವಾಸಿ ಚೋಮು (62) ಎಂಬವರು ಹಾವು ಕಡಿತಕ್ಕೊಳಗಾಗಿ ಮೊನ್ನೆ 3 ರಂದು ಬುಧವಾರ ರಾತ್ರಿ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರದ ವಿಧಿ 4 ರಂದು ಗುರುವಾರ ಸಂಜೆ ನಡೆಯಿತು. ಅಂದು ರಾತ್ರಿ ಮನೆ ಚಾವಡಿಯಲ್ಲಿ ನೀರು ಇಡುವ ಸಂಪ್ರದಾಯ ನಡೆಯಿತು. ಮನೆ ಚಾವಡಿಯಲ್ಲಿ ಬೂದಿ ಹರಡಿ ಅದರ ನಡುವಿನಲ್ಲಿ ಪಾತ್ರವೊಂದರಲ್ಲಿ ನೀರು ಇಡಲಾಗಿತ್ತು. ಮನೆ ಹಿಂಬದಿ ಬಾಗಿಲು ಭದ್ರ ಪಡಿಸಲಾಗಿತ್ತು. ಮುಂಬಾಗಿಲಿನಲ್ಲಿ ನಾಲ್ಕು ಮಂದಿ ಜನ ಮಲಗಿದ್ದರು. ನಿನ್ನೆ ಬೆಳಗ್ಗೆ ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ನಾಗರ ಹಾವು ಬಂದು ಪಾತ್ರದಲ್ಲಿದ್ದ ನೀರನ್ನು ಕುಡಿದು ತೆರಳಿರಬಹುದೆಂಬ ನಂಬಿಕೆ ಮನೆಯವರದ್ದಾಗಿದೆ. ಹಾವು ಬಂದಿರುವುದಕ್ಕೆ ಸಾಕ್ಷಿ ಎಂಬಂತೆ ಬೂದಿ ಮೇಲೆ ಹರಡಿರುವ ಹಾವಿನ ಗುರುತನ್ನು ತೋರಿಸುತ್ತಾರೆ ಮನೆಯವರು. ಇದಕ್ಕೂ ಮಿಗಿಲಾದ ವಿಷಯವೇನೆಂದರೆ, ಚೋಮು ಅವರ ಸಾವಿಗೆ ಕಾರಣವಾದ ನಾಗರ ಹಾವನ್ನು ಹಾವು ಹಿಡಿಯುವವರು ಬಂದು ಹಿಡಿದು ಅರಣ್ಯಕ್ಕೆ ಕೊಂಡೊಯ್ದು ಬಿಟ್ಟಿದ್ದರು. ಹಾಗಾದರೆ ನೀರು ಕುಡಿಯಲು ಬಂದ ಹಾವು ಯಾವುದು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಅದೇನಿದ್ದರೂ, ಸರಳ ಸಜ್ಜನಿಕೆಯ ಚೋಮು ಅವರ ಸಾವಿಗೆ ಜನರು ಮರುಕ ವ್ಯಕ್ತಪಡಿಸುತ್ತಿದ್ದಾರೆ.



