ಕೇರಳ ತುಳು ಅಕಾಡೆಮಿಯ ನೂತನ ಕಾರ್ಯದರ್ಶಿ ಸ್ಥಾನಕ್ಕೆ ವರ್ಕಾಡಿ ನಿವಾಸಿ ಪ್ರದೀಪ್ ಕುಮಾರ್ ಬೋಳ್ನ ನೇಮಕ.
ಜುಲೈ 17, 2024
0
ಕೇರಳ ತುಳು ಅಕಾಡೆಮಿಯ ನೂತನ ಕಾರ್ಯದರ್ಶಿ ಸ್ಥಾನಕ್ಕೆ ವರ್ಕಾಡಿ ನಿವಾಸಿ ಪ್ರದೀಪ್ ಕುಮಾರ್ ಬೋಳ್ನ ನೇಮಕ.
ಮಂಜೇಶ್ವರ: ಕೇರಳ ಸರಕಾರದ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಯಾದ ಕೇರಳ ತುಳು ಅಕಾಡೆಮಿಗೆ ನೂತನ ಕಾರ್ಯದರ್ಶಿಯಾಗಿ ವರ್ಕಾಡಿ ಪಂಚಾಯತಿನ ಕೊಡ್ಲಮೊಗರು ನಿವಾಸಿಯಾದ ಶ್ರೀ ಪ್ರದೀಪ್ ಕುಮಾರ್ ಬೋಳ್ನರವರನ್ನು ನೇಮಿಸಿ ಕೇರಳ ಸರಕಾರ ಆದೇಶ ಹೊರಡಿಸಿದೆ. ಇವರು ಪ್ರಸ್ತುತ ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿಯವರ ಕಚೇರಿಯಲ್ಲಿ ಉಪಜಿಲ್ಲೆಯ ನೂನ್ ಮೀಲ್ ಆಫೀಸರ್ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಈ ಮೊದಲು ಕೇರಳ ತುಳು ಅಕಾಡೆಮಿಯ ಕಾರ್ಯದರ್ಶಿ ಯಾಗಿ 2020 ರಿಂದ 2022 ರ ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು. ಸಾಮಾಜಿಕ ಕಾರ್ಯಕರ್ತರಾದ ಕೆ. ಆರ್. ಜಯಾನಂದರವರ ಅಧ್ಯಕ್ಷ ಸ್ಥಾನದಲ್ಲಿ ಮುನ್ನಡೆಯುತ್ತಿರುವ ಕೇರಳ ತುಳು ಅಕಾಡೆಮಿಯಲ್ಲಿ ಪ್ರಸ್ತುತ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿ. ಹಾಗೂ ಕೋಶಾಧಿಕಾರಿಯಾಗಿ ಕಾಸರಗೋಡು ಜಿಲ್ಲಾಧಿಕಾರಿ ಇಂಬಶೇಖರ ಐ.ಎ.ಎಸ್, ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತಾನ್, ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಸಹಿತ ಒಟ್ಟು 18 ಸದಸ್ಯರು ಒಳಗೊಂಡಿದ್ದಾರೆ. ತುಳು ಭಾಷೆಯ ಮತ್ತು ಸಂಸ್ಕೃತಿಯ ಉಳಿವಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವುದು ಕೇರಳ ತುಳು ಅಕಾಡೆಮಿಯ ಗುರಿಯಾಗಿದೆ. ಪ್ರಸ್ತುತ ಕೇರಳ ತುಳು ಅಕಾಡೆಮಿಯ ಸುಸ್ಸಜಿತವಾದ ಕಚೇರಿ ಹೊಸಂಗಡಿ - ಆನೆಕಲ್ಲು ರಸ್ತೆಯ ದುರ್ಗಿಪಳ್ಳದಲ್ಲಿದೆ.



