ಕಾಸರಗೋಡು: ಹಿಂದೂ ಐಕ್ಯವೇದಿ ಮಂಜೇಶ್ವರ ತಾಲೂಕು ಸಂಚಾಲಕರಾಗಿ ಗಿರಿ ವೀರನಗರ ಆಯ್ಕೆಯಾದರು. ಕಾಂಞಂಗಾಡಿನ ಮಾವುಂಗಲ್ ವ್ಯಾಪಾರ ಭವನದಲ್ಲಿ ನಡೆದ ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾ ಸಮ್ಮೇಳನದಲ್ಲಿ ವಿವಿಧ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಮ್ಮೇಳನವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ. ಹರಿದಾಸ್ ಉದ್ಘಾಟಿಸಿದರು. ರಾಜ್ಯ ರಕ್ಷಾಧಿಕಾರಿ ವಲ್ಸನ್ ತಿಲ್ಲಂಗೇರಿ, ಜಿಲ್ಲಾಧ್ಯಕ್ಷ ಕೆ.ಪಿ. ಶಾಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್ ಸೇರಿದಂತೆ ಹಲವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಗಡಿನಾಡು ಮಂಜೇಶ್ವರದಲ್ಲಿ ಹಲವು ವರ್ಷಗಳಿಂದ ಸಕ್ರಿಯ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಗಿರಿ ವೀರನಗರ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ವಿವಿಧ ಸಂಘಟನೆಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಶಾಲಾ–ಕಾಲೇಜು ದಿನಗಳಿಂದಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಯುವ ಮೋರ್ಚಾ ಮಂಡಲ ಅಧ್ಯಕ್ಷ, ಬಿಜೆಪಿ ಮಂಡಲ ಉಪಾಧ್ಯಕ್ಷ, ಬಾಲಗೋಕುಲ ಸಮಿತಿ ಅಧ್ಯಕ್ಷ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಹಿಂದೂ ಐಕ್ಯವೇದಿ ತಾಲೂಕು ಸಂಚಾಲಕರಾಗಿ ಆಯ್ಕೆಯಾದ ಗಿರಿ ವೀರನಗರ ಅವರನ್ನು ನಾಡಿನ ಪ್ರಮುಖರು ಅಭಿನಂದಿಸಿದ್ದಾರೆ.
