ಕಾಸರಗೋಡು : ಆರಾಧನೆಯ ಜೊತೆಗೆ ಸಾಂಸ್ಕೃತಿಕ ಬೆಳವಣಿಗೆಗೆ ಯಕ್ಷಗಾನ ಕಾರಣವಾಗುತ್ತದೆ. ಯುವಜನತೆಯನ್ನು ಅನೇಕ ಪಿಡುಗುಗಳಿಂದ ದೂರಮಾಡಲು ಈ ಕಲೆಯ ಮೂಲಕ ಸಾಧ್ಯ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಪೇಟೆ ಶ್ರೀ ವೆಂಕಟ್ರಮಣ ದೇವಾಲಯದಲ್ಲಿ ಭಾನುವಾರ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾಸಂಘದ ಪ್ರಾಯೋಜಕತ್ವದಲ್ಲಿ ನಡೆದ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ಬೆಳ್ಳಿಹಬ್ಬಾಚರಣೆ ರಜತ ರಂಗದ ಚತುರ್ಥ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ಮಾಡಿದರು.
ಎರಡು ಸಮಾನ ಸಾಧನೆಯ, ಮನಸ್ಸಿನ ಸಂಘಟನೆಗಳು ಜಂಟಿಯಾಗಿ ನಡೆಸುವ ಕಾರ್ಯಕ್ರಮಗಳು ಬಹುಸಾಧ್ಯತೆಯ ಯಕ್ಷಗಾನವನ್ನು ಉಳಿಸಿ ಬೆಳೆಸುತ್ತದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ತಂತ್ರವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರು ಆಶೀರ್ವಚನ ಮಾಡಿ ಕನ್ನಡ ಭಾಷೆ, ಸಂಸ್ಕೃತಿ ಉಳಿಕೆಯಲ್ಲಿ ಯಕ್ಷಗಾನದ ಕೊಡುಗೆ ಅನನ್ಯ ಎಂದರು.
ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ತಮ್ಮ ವಿವಾಹ ಜೀವನದ 25 ವರ್ಷ ಪೂರೈಸಿದ ವೆಂಕಟ್ರಮಣ ಹೊಳ್ಳ-ರೂಪಕಲಾ ದಂಪತಿಯನ್ನು ರಜತರಂಗ ಸಮಾರಮಭದ ಪರವಾಗಿ ಅಭಿನಂದಿಸಲಾಯಿತು. ಹಿರಿಯ ಕಲಾವಿದರಾದ ಬಣ್ಣದ ಕುಟ್ಯಪ್ಪು ಅವರ ಬಗ್ಗೆ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಕೂಡ್ಲು ಆನಂದ ಅವರ ಬಗ್ಗೆ ಪತ್ರಕರ್ತ ವೀಜಿ. ಕಾಸರಗೋಡು ಸಂಸ್ಮರಣೆ ಭಾಷಣ ಮಡಿದರು. ಈ ಕಲಾವಿದರ ಮನೆಮಂದಿ ರವೀಂದ್ರ ಮತ್ತು ರವಿ ಅವರನ್ನು ಗೌರವಿಸಲಾಯಿತು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಯೋಜನಾಧಿಕಾರಿ ದಿನೇಶ್, ಕನ್ನಡ ಭವನ ಸಂಸ್ಥಾಪಕ ಡಾ.ಕೆ.ವಾಮನರಾವ್ ಬೇಕಲ್, ಜ್ಯೋತಿಷಿ ಸಿ.ಪಿ.ಪೊದುವಾಳ್, ರಜತರಂಗ ಅಧ್ಯಕ್ಷ ಡಾ.ಹರಿಕಿರಣ್ ಬಂಗೇರ ಉಪಸ್ಥಿತರಿದ್ದರು. ಕೆ.ಎನ್.ರಾಮಕೃಷ್ಣ ಹೊಳ್ಳ ಸ್ವಾಗತಿಸಿದರು. ಕಲಾವಿದ ಶೇಣಿ ವೇಣುಗೋಪಾಲ ಭಟ್ ಕಾರ್ಯಕ್ರಮ ನಿರೂಪಿಸಿದರು. ರಾಮಪ್ರಸಾದ್ ಕೂಡ್ಲು ವಂದಿಸಿದರು.
ಕಾರ್ಯಕ್ರಮ ಅಂಗವಾಗಿ ಕೀಚಕ ವಧೆ ತಾಳಮದ್ದಲೆ ನಡೆಯಿತು. ಹಿಮ್ಮೆಳದಲ್ಲಿ ಭಾಗವತರಾಗಿ ರಾಮಪ್ರಸಾದ ಮಯ್ಯ ಕೂಡ್ಲು, ಚೆಂಡೆ,ಮದ್ದಲೆಗಳಲ್ಲಿ ಲಕ್ಷ್ಮೀಶ ಬೇಂಗ್ರೋಡಿ, ವಿಕ್ರಂ ಮಯ್ಯ, ಚಕ್ರತಾಳದಲ್ಲಿ ಮಾಹಿತ್ ಕೂಡ್ಲು ಸಹಕರಿಸಿದರು. ಅರ್ಥಧಾರಿಗಳಾಗಿ ಜಬ್ಬಾರ್ ಸಮೊ, ನಾಗರಾಜ ಪದಕಣ್ಣಾಯ, ಶೇಣಿ ವೇಣುಗೋಪಾಲ ಭಟ್, ಅಚ್ಯುತ ಬಲ್ಯಾಯ ಭಾಗವಹಿಸಿದರು. ತದನಂತರ ತರಬೇತಿ ಕೇಂದ್ರದ ಸದಸ್ಯರಿಂದ ಕರ್ಣಾರ್ಜುನ ಯಕ್ಷಗಾನ ಪ್ರದರ್ಶನ ನಡೆಯಿತು. ಭಾಗವತರಾಗಿ ತಲ್ಪಣಾಜೆ ವೆಂಟಕ್ರಮಣ ಭಟ್, ಚೆಂಡೆ-ಮದ್ದಲೆಗಳಲ್ಲಿ ಲಕ್ಷ್ಮೀಶ ಬೇಂಗ್ರೋಡಿ, ವಿಕ್ರಂ ಮಯ್ಯ, ಚಕ್ರತಾಳದಲ್ಲಿ ಅರ್ಪಿತ್ ಶೆಟ್ಟಿ ಕೂಡ್ಲು ಸಹಕರಿಸಿದರು.
