ಕುಂಬಳೆ ಪೇಟೆಯಲ್ಲಿ ಸಮಸ್ಯೆಗಳ ಆಗರವಾದ ನೂತನ ಸಂಚಾರ ವ್ಯವಸ್ಥೆ: ತುರ್ತು ಪರಿಹಾರ ಕಾಣದಿದ್ದಲ್ಲಿ ಸ್ಥಳೀಯಾಡಳಿತ ಚುನಾವಣೆಗೆ ಸ್ಪರ್ಧಿಸುವುದು ಖಚಿತ.
- ಎನ್.ಕೇಶವ ನಾಯಕ್.
ಕುಂಬಳೆ: ಕುಂಬಳೆ ಪೇಟೆಯ ಅಭಿವೃದ್ಧಿಯ ಹೆಸರಲ್ಲಿ ನಡೆಸುವ ಹಲವು ಯೋಜನೆಗಳು ಅವೈಜ್ಞಾನಿಕವಾಗಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ಹಿಂದೆ ವ್ಯಾಪಕ ಆರ್ಥಿಕ ಭ್ರಷ್ಟಾಚಾರ ಹುದುಗಿಕೊಂಡಿದೆ. ಜನಸಾಮಾನ್ಯರ ತೆರಿಗೆ ಹಣದ ದುರುಪಯೋಗ ಸಮರ್ಪಕವಲ್ಲದ ಯೋಜನೆಗಳು, ಸರ್ಕಾರದ ಖಜಾನೆಗೆ ಉಂಟಾಗುವ ನಷ್ಟವಾಗಿದ್ದು ಇದನ್ನು ಕೂಡಲೇ ಸರಿಪಡಿಸದಿದ್ದರೆ ಕುಂಬಳೆ ಪೇಟೆ ಪ್ರತಿನಿಧಿಸುವ ವಾರ್ಡಿನಿಂದ ಸ್ಥಳಿಯಾಡಳಿತ ಚುನಾವಣಾ ಕಣಕ್ಕೆ ಇಳಿಯುವುದರ ಜೊತೆಗೆ ಹೈಕೋರ್ಟನ್ನು ಸಂಪರ್ಕಿಸಲಾಗುವುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಎನ್.ಕೇಶವ ನಾಯ್ಕ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ. ನೂತನ ವ್ಯವಸ್ಥೆಯಲ್ಲಿ ಬಸ್ಸು ತಿರುಗುವಿಕೆಗೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಯಾತ್ರಿಕರಿಗೆ ಇಳಿಯಲು ಮತ್ತು ಹತ್ತಲು ಬಹಳ ಕಷ್ಟ ಅನುಭವಿಸುತ್ತಿದ್ದಾರೆ, ಇದರಿಂದಾಗಿ ರೋಗಿಗಳು, ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಕುಂಬಳೆ ರೈಲು ನಿಲ್ದಾಣದಿಂದ ಬಸ್ಸಿಗಾಗಿ ಬಹುದೂರ ನಡೆಯಬೇಕಾದ ಸ್ಥಿತಿ ಈಗ ನಿರ್ಮಾಣವಾಗಿದೆ. ಇಂತಹ ಅವ್ಯವಸ್ಥೆಯಿಂದಾಗಿ ಸರಿಯಾದ ಸಮಯಕ್ಕೆ ಯಾತ್ರಕರಿಗೆ ವಿದ್ಯಾರ್ಥಿಗಳಿಗೆ ಉದ್ಯೋಗಾರ್ಥಿಗಳಿಗೆ ಸರಿಯಾದ ಸಮಯಕ್ಕೆ ತಮ್ಮ ಕೇಂದ್ರಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರಿಕ್ಷಾ ಕಾರು ಟೆಂಪೆÇೀ ಲಾರಿ ಬಾಡಿಗೆ ವಾಹನಗಳ ಚಾಲಕ ಅನುಭವಿಸುವ ಸಮಸ್ಯೆಗಳು ಬಹಳವಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಗೂಡಂಗಡಿಗಳ, ಮೀನು ಮಾರಾಟ, ತರಕಾರಿ ವ್ಯಾಪಾರ ಮೊದಲಾದವುಗಳಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ. ಕುಂಬಳೆ ಪೇಟೆಯಲ್ಲಿ ಸರಿಯಾದ ರೀತಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದೆ ವಾಹನ ಅಪಘಾತಗಳು ನಿರಂತರ ನಡೆಯುತ್ತಿದೆ.
ಕಾಸರಗೋಡು - ಮಂಗಳೂರು ಕಡೆ ಹೋಗುವ ದೂರ ಸಂಚಾರ ಬಸ್ಸುಗಳಿಗೆ ಬರಲು ಹಾಗು ತೆರಳಲು ಈಗಿರುವ ವ್ಯವಸ್ಥೆಯ ಬದಲಾಗಿ ಮೊದಲಿನ ಬಸ್ ನಿಲ್ದಾಣ ಹತ್ತಿರದ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಯೋಜನೆ ಬಿಟ್ಟು ತುರ್ತಾಗಿ ತೆರೆದು ಅದರ ಪಕ್ಕದಲ್ಲಿರುವ ಸ್ಥಳ ಸ್ವಚ್ಛಗೊಳಿಸಿ ಬಸ್ಸುಗಳಿಗೆ ವ್ಯವಸ್ಥೆ ಮಾಡಬೇಕು. ಕುಂಬಳೆ ಪೇಟೆಯಲ್ಲಿ ಸಾರ್ವಜನಿಕರಿಗೆ ಸರಿಯಾದ ರೀತಿಯ ಬಸ್ಸು ತಂಗುದಾಣ ಹಾಗು ಶೌಚಾಲಯದ ವ್ಯವಸ್ಥೆ ತುರ್ತಾಗಿ ಮಾಡಬೇಕು, ಅಸಮರ್ಪಕ ರೀತಿಯ ಬಸ್ ತಂಗುದಾಣ ನಿರ್ಮಿಸಿರುವುದರಿಂದ ತುರ್ತು ಸೇವೆ ವಾಹನ ಆಂಬುಲೆನ್ಸ್, ಅಗ್ನಿಶಾಮಕದಳ ಸಂಚಾರಕ್ಕೆ ಗೊಂದಲಗಳಾಗುತ್ತಿದೆ. ಅಪಘಾತ ಸಂಭವಿಸಿ ದಾರುಣ ಘಟನೆಗಳು ನಡೆಯದಂತೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕುಂಬಳೆಯ ಸಮುದಾಯ ಆರೋಗ್ಯ ಕೇಂದ್ರ 24 ಗಂಟೆ ಕಾಲ ತುರ್ತು ಸೇವೆ, ಹೆರಿಗೆ ಇನ್ನಿತರ ಚಿಕಿತ್ಸೆಗೆ ಸಹಕಾರಿಯಾಗುವಂತೆ ಮೇಲ್ದರ್ಜೆಗೇರಿಸಬೇಕು ಎಂದವರು ತಿಳಿಸಿದರು.
ಪ್ರಚಲಿ ಕುಂಬಳೆಯ ನಾಗರಿಕರು ಅನುಭವಿಸುವ ಸಮಸ್ಯೆಗಳಿಗೆ ಆಡಳಿತಾರೂಢ ಹಾಗು ವಿರೋಧಾ ಪಕ್ಷೆಗಳು ಸಮರ್ಪಕವಾಗಿ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮುಂಬರುವ ಸ್ಥಳೀಯಾಡಳಿತ ಚುನಾವಣೆಯಲ್ಲಿ ರಾಜಕೀಯ ರಹಿತ ಪಕ್ಷೇತರ ಅಭ್ಯರ್ಥಿಯಾಗಿ ಪೇಟೆಯ ವಾರ್ಡಿನಿಂದ ಸ್ಪರ್ಧಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತಾನು ನಿರ್ಧರಿಸುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿರುವರು.
