ಕುಂಬಳೆ: ಗಡಿ ಪ್ರದೇಶವಾದ ಕಾಸರಗೋಡಿನ ಕನ್ನಡ ಹೋರಾಟಗಾರರು ಮತ್ತು ಕನ್ನಡ ಮಾಧ್ಯಮಗಳು ಕನ್ನಡ ಭಾಷೆಗಾಗಿ ಏನು ಮಾಡುತ್ತಿವೆ ಎಂದು ಕುಂಬಳೆಯ ಆರ್.ಟಿ.ಐ. ಕಾರ್ಯಕರ್ತ ಮತ್ತು ತ್ರಿಸ್ಥರ ಹಂತದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೇಶವ ನಾಯಕ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ತಾನು ನಾಮಪತ್ರ ಸಲ್ಲಿಸುವಾಗ ಕನ್ನಡದಲ್ಲಿ ಯಾವುದೇ ನಮೂನೆಗಳಿಲ್ಲದೆ ಭರ್ತಿಗೊಳಿಸಲು ಸಂಕಷ್ಟಕ್ಕೊಳಗಾಗಬೇಕಾಯಿತು. ಬಳಿಕ, ನಾಮಪತ್ರಿಕೆಗಳನ್ನು ಮಲಯಾಳಂ ಸ್ನೇಹಿತರು ಮತ್ತು ಅಧಿಕಾರಿಗಳ ಸಹಾಯದಿಂದ ಅನುವಾದಿಸಲಾಯಿತು. ಇದಲ್ಲದೆ, ಎಸ್.ಐ.ಆರ್. ಫಾರ್ಮ್ಗಳು ಸಂಪೂರ್ಣ ಮಲೆಯಾಳಂನಲ್ಲಿ ಮಾತ್ರ ನೀಡಲಾಗಿದೆ. ಕನ್ನಡವನ್ನು ಮಾತ್ರ ತಿಳಿದಿರುವ ಗಡಿ ಪ್ರದೇಶದ ಜನರು ಫಾರ್ಮ್ಗಳನ್ನು ಹೇಗೆ ಭರ್ತಿ ಮಾಡಬೇಕು ಎಂದು ಅವರು ಪ್ರಶ್ನಿಸಿದರು.
ಕನ್ನಡ ಭಾಷೆಗಾಗಿ ಹೋರಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಜನರು ಕನ್ನಡದಲ್ಲಿ ಎಸ್.ಐ.ಆರ್. ಫಾರ್ಮ್ಗಳನ್ನು ಪಡೆಯಲು ಅಥವಾ ಅವುಗಳನ್ನು ಭರ್ತಿ ಮಾಡಲು ಜನರಿಗೆ ಸಹಾಯ ಮಾಡಲು ಏನು ಮಾಡಿರುವಿರಿ ಎಮದು ಪ್ರಶ್ನಿಸಿದರು.
ವಿವಿಧ ಭಾಷೆಗಳನ್ನು ಮಾತನಾಡುವ ಮಂಜೇಶ್ವರದ ಜನರು ಅನಾಥರಂತೆ ವಾಸಿಸುತ್ತಿರುವಾಗ ಕನ್ನಡ ಭಾಷಾ ಕಾರ್ಯಕರ್ತರು ಭಾಷೆಯ ಹೆಸರಿನಲ್ಲಿ ದ್ವೇಷವನ್ನು ಮಾತ್ರ ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಕನ್ನಡವನ್ನು ಮಾತೃಭಾಷೆಯಾಗಿ ಮಾತನಾಡುವ ಮಂಜೇಶ್ವರದ ಜನರ ಪ್ರತಿನಿಧಿಯಾಗಿ ಕನ್ನಡ ಭಾಷೆಗೆ ನ್ಯಾಯ ಕೋರಿ ಸುಪ್ರೀಂ ಕೋರ್ಟ್ಗೆ ಹೋಗಲು ತಾನು ಸಿದ್ಧ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು. ಮಲಯಾಳಂ ಮಾಧ್ಯಮಗಳು ಕನ್ನಡ ಭಾಷೆಗಾಗಿ ಮಾತನಾಡಲು ತೋರಿಸಿದ ಉತ್ಸಾಹವನ್ನು ಕನ್ನಡ ಮಾಧ್ಯಮಗಳು ಸಹ ತೋರಿಸುತ್ತಿಲ್ಲ ಎಂದು ಅವರು ಈ ಸಂದರ್ಭ ಆರೋಪಿಸಿದರು.
ಕನ್ನಡ ಮಾಧ್ಯಮ, ಸಂಘಟನೆ ಹೆಸರಲ್ಲಿ ಹಲವರು ಮಾಧ್ಯಮ ಸಂಪರ್ಕವಿಲ್ಲದವರು ಅಥವಾ ಯಾವುದೋ ಕಾಲದಲ್ಲಿ ಪತ್ರಿಕೆಯಲ್ಲಿ ಯಾವುದೋ ವಿಭಾಗದಲ್ಲಿ ಜಕೆಲವು ಕಾಲ ದುಡಿದವರು ಈಗಲೂ ಪತ್ರಕರ್ತರ ಸೋಗಿನಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಇಲ್ಲಿ ನೈಜ ಪತ್ರಕರ್ತರಿಗೆ ಯಾವುದೇ ಮೌಲ್ಯ ಲಭಿಸುತ್ತಿಲ್ಲ. ಉತ್ಸವಗಳ ಹೆಸರಲ್ಲಿ ಕರ್ನಾಟಕದಿಂದ ಹಣ ಜೇಬಿಗಿಳಿಸುವ ಹಲವರು ಇಲ್ಲಿಯ ಕನ್ನಡಿಗರ ನೈಜ ಸಮಸ್ಯೆಗಳತ್ತ ಗಮನ ನೀಡುತ್ತಿಲ್ಲ ಎಂದವರು ಆರೋಪಿಸಿದರು.
ಈ ಎಲ್ಲಾ ವಂಚನೆಗಳಿಗೆ ಕೊನೆಹಾಡಲು ತಾನು ಶೀಘ್ರ ಸುಪ್ರೀಂಕೋರ್ಟ್ ಸಂಪರ್ಕಿಸುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
