ಮಂಜೇಶ್ವರ ಎಸ್.ಎ.ಟಿ ಶಾಲಾ ಆವರಣದ ನೆಲ್ಲಿಕಾಯಿ ಮರದಲ್ಲಿ ಕಂಬಳಿ ಹುಳ ಹಾವಳಿ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕಳೆದ 3 ದಿನಗಳಿಂದ 8 ಹಾಗೂ 9 ನೇ ತರಗತಿಗಳಿಗೆ ರಜೆ.
ಜನವರಿ 23, 2025
0
ಮಂಜೇಶ್ವರ ಎಸ್.ಎ.ಟಿ ಶಾಲಾ ಆವರಣದ ನೆಲ್ಲಿಕಾಯಿ ಮರದಲ್ಲಿ ಕಂಬಳಿ ಹುಳ ಹಾವಳಿ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕಳೆದ 3 ದಿನಗಳಿಂದ 8 ಹಾಗೂ 9 ನೇ ತರಗತಿಗಳಿಗೆ ರಜೆ.
ಮಂಜೇಶ್ವರ: ಎಸ್.ಎ.ಟಿ ಶಾಲಾ ಆವರಣದ ನೆಲ್ಲಿಕಾಯಿ ಮರವೊಂದರಲ್ಲಿ ಅಸಂಖ್ಯಾತ ಕಂಬಳಿ ಹುಳ (ಕಾಟರ್ ಪಿಲರ್) ಗಳು ಮೆತ್ತಿದ್ದು, ಕಳೆದ ನಾಲ್ಕು ದಿವಸಗಳಿಂದ ಅಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಪೋಷಕರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ನೆಲ್ಲಿಕಾಯಿ ಮರಕ್ಕೆ ಸಾವಿರಾರು ಕಂಬಳಿ ಹುಳಗಳು ಮೆತ್ತಿಕೊಂಡ ಪರಿಣಾಮ ಹುಳುಗಳು ಎಲ್ಲೆಂದರಲ್ಲಿ ಹರಿದಾಡುತಿದ್ದು, ಶಾಲಾ ಅಧಿಕಾರಸ್ಥರ ನೆಮ್ಮದಿ ಕೆಡಿಸಿವೆ. ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಚರ್ಮದ ತುರಿಕೆ ಆರಂಭಗೊಂಡು ವಿಷಯ ಏನೆಂದು ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ತುರಿಕೆ ಕಾಣಿಸಿಕೊಂಡಿರುವ ವಿದ್ಯಾರ್ಥಿಗಳ ತರಗತಿಗಳಾದ 8A, 8B, 8C, 8D, ಮತ್ತು 9B, 9C, 9D ತರಗತಿಗಳಿಗೆ ಕಳೆದ 3 ದಿನಗಳಿಂದ ರಜೆಯನ್ನು ಕೂಡಾ ನೀಡಲಾಗಿದೆ. ಈ ತರಗತಿಯ ಪಕ್ಕವೇ ಕಂಬಳಿ ಹುಳವಿರುವ ಮರವಿದೆ. ಪೋಷಕರಲ್ಲಿಯೂ ಈ ವಿಷಯ ಭಾರೀ ಆತಂಕವನ್ನು ಸೃಷ್ಟಿಸಿತ್ತು. ಬಳಿಕ ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ವೈದ್ಯಾಧಿಕಾರಿ ಹಾಗೂ ತಂಡ ತಪಾಸಣೆ ನಡೆಸಿದಾಗ ಸಮೀಪದ ನೆಲ್ಲಿಕಾಯಿ ಮರದಲ್ಲಿ ಕಂಬಳಿ ಹುಳ ಕಂಡು ಬಂದಿದೆ. ಕೆಲವೊಂದು ವಿದ್ಯಾರ್ಥಿಗಳಲ್ಲಿ ಚರ್ಮದ ತುರಿಕೆಯ ಜೊತೆಯಾಗಿ ಗುಳ್ಳೆಗಳು ಕಂಡು ಬಂದಿತ್ತೆಂಬ ಮಾಹಿತಿ ಲಭಿಸಿದೆ. ಶಾಲೆಯ ಆವರಣಕ್ಕೆ ತಲುಪಿದರೆ ಸಾಕು ಮೈ ಮೇಲೆ ಹುಳಗಳು ಬೀಳುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಗುರುವಾರ ಕೃಷಿ ಅಧಿಕಾರಿ ರಾಧಾಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಹುಳವನ್ನು ವರ್ಕಾಡಿ ವಿಜ್ಞಾನ ಕೇಂದ್ರಕ್ಕೆ ಕೊಂಡೊಯ್ದು ತಪಾಸಣೆ ನಡೆಸಿ ಇದರಲ್ಲಿ ಜೀವಕ್ಕೆ ಅಪಾಯವಿಲ್ಲವೆಂಬ ಮಾಹಿತಿ ನೀಡಿ, ಆರೋಗ್ಯ ಅಧಿಕಾರಿಗಳ ನಿರ್ದೇಶದಲ್ಲಿ ಕಂಬಳಿ ಹುಳವನ್ನು ನಾಶ ಪಡಿಸುವ ಮದ್ದನ್ನು ಸಿಂಪಡಿಸುವಂತೆ ಸೂಚಿಸಿದ್ದಾರೆ. ಕಂಬಳಿಹುಳ ಜಾತಿಗೆ ಸೇರಿದ ಹುಳ ಇದಾಗಿದ್ದು, ಸಣ್ಣಪುಟ್ಟ ತೊಂದರೆಗಳು ಈ ಹುಳವಿನಿಂದ ಉಂಟಾದರೂ ಜೀವಕ್ಕೆ ಅಪಾಯವಿಲ್ಲವೆಂದು ತಿಳಿಸಿದ್ದಾರೆ. ಅದೇ ರೀತಿ ಹುಳಗಳು ಇರುವ ಜಾಗಕ್ಕೆ ಕ್ಲೋರೋಫಾರಿಸಸ್ ಅಥವಾ ನುವಾನ್ ಔಷಧ ಸಿಂಪಡಣೆ ಮಾಡಿದರೆ, ಹುಳಗಳ ಸಂಖ್ಯೆ ಕಡಿಮೆಯಾಗಲಿದೆಂದು ಕೃಷಿ ಅಧಿಕಾರಿ ಡಾ. ಬಾರಿಕ್ಕಾಡ್ ದಿನೇಶನ್ ತಿಳಿಸಿದ್ದಾರೆ. ಇದೀಗ ಮರದ ಬುಡಕ್ಕೆ ಹಾಗೂ ಪರಿಸರದ ಎಲ್ಲಾ ಗಿಡಗಳಿಗೆ ಔಷಧವನ್ನು ಸಿಂಪಡಣೆ ಮಾಡಿಸಲಾಗಿದೆ. ಕಂಬಳಿ ಹುಳ ನಿರ್ಮೂಲನೆ ಮಾಡಲು ಶಾಲಾ ಆಡಳಿತ ಮಂಡಳಿ ಮೊದಲಿನಿಂದಲೇ ಸೂಕ್ತ ಕ್ರಮ ಕೈಗೊಂಡಿದ್ದರು ಎಂದು ಶಾಲಾ ಆಡಳಿತ ಮಂಡಳಿ ನಮ್ಮ ಮಂಜೇಶ್ವರ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.




