ಬೇಕೂರು ಶಾಲೆಯಲ್ಲಿ ರ್ಯಾಗಿಂಗ್; ದೃಶ್ಯಾವಳಿ ಸೆರೆ ಹಿಡಿದ ಪತ್ರಕರ್ತನ ಮೇಲೆ ಹಲ್ಲೆ. ತಪ್ಪಿತಸ್ಥ ವಿದ್ಯಾರ್ಥಿಗಳಿಗೆ ಕೇಸ್ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಲು ಪತ್ರಕರ್ತರ ಸಂಘಟನೆ ಆಗ್ರಹ.
ಆಗಸ್ಟ್ 20, 2024
0
ಬೇಕೂರು ಶಾಲೆಯಲ್ಲಿ ರ್ಯಾಗಿಂಗ್; ದೃಶ್ಯಾವಳಿ ಸೆರೆ ಹಿಡಿದ ಪತ್ರಕರ್ತನ ಮೇಲೆ ಹಲ್ಲೆ.
ತಪ್ಪಿತಸ್ಥ ವಿದ್ಯಾರ್ಥಿಗಳಿಗೆ ಕೇಸ್ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಲು ಪತ್ರಕರ್ತರ ಸಂಘಟನೆ ಆಗ್ರಹ.
ಮಂಜೇಶ್ವರ: ಮಂಗಲ್ಪಾಡಿ ಗ್ರಾಮ ಪಂಚಾಯತ್ ಗೊಳಪಟ್ಟ ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಬಳಿ ವಿದ್ಯಾರ್ಥಿಗಳ ಗುಂಪು ಜೂನಿಯರ್ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡುತ್ತಿರುವ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ಪತ್ರಕರ್ತರ ಮೇಲೆ ವಿದ್ಯಾರ್ಥಿಗಳ ಗುಂಪು ಮತ್ತು ಅವರಿಗೆ ಸಹಾಯ ಮಾಡಿದ ಕೆಲವು ಪುಂಡರು ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಪ್ರಸಿದ್ಧಿ ಪಡೆದ ಮಲಯಾಳಂ ಚಾನೆಲ್ ಜನಮ್ ಟಿವಿಯ ಮಂಜೇಶ್ವರ ವ್ಯಾಪ್ತಿ ಪ್ರದೇಶದ ವರದಿಗಾರ ಹಾಗೂ ಕೇರಳ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಜೊತೆ ಕಾರ್ಯದರ್ಶಿ ಉಪ್ಪಳ ಐಲ ನಿವಾಸಿ ಧನರಾಜ್ (32) ರವರ ಮೇಲೆ ಹಲ್ಲೆ ನಡೆಸಲಾಗಿದೆ. ಕೆಲಸದ ಭಾಗವಾಗಿ ಆ ಮಾರ್ಗವಾಗಿ ತೆರಳುತ್ತಿದ್ದಾಗ ಬೇಕೂರಲ್ಲಿ ರಸ್ತೆಬದಿ ಮಕ್ಕಳ ನಡುವೆ ಜಗಳ ನಡೆಯುವುದನ್ನು ಕಂಡು ಮುಖ್ಯಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ.
ಶಿಕ್ಷಕರು ಮತ್ತು ಇತರರು ಸ್ಥಳಕ್ಕೆ ಆಗಮಿಸಿ ದೃಶ್ಯವನ್ನು ಚಿತ್ರೀಕರಿಸಿದರು ಮತ್ತು ವಿದ್ಯಾರ್ಥಿಗಳನ್ನು ತೆರಳುವಂತೆ ಸೂಚಿಸಿದರು. ಆದರೂ ಬಿಡದ ವಿದ್ಯಾರ್ಥಿಗಳು ಆ ಮಾರ್ಗವಾಗಿ ಬಸ್ ಹತ್ತಿ ಪರಾರಿಯಾಗಲು ಯತ್ನಿಸಿದ ಕೆಲ ವಿದ್ಯಾರ್ಥಿಗಳನ್ನು ಹಿಂಬಾಲಿಸಿ ಬಸ್ ನಲ್ಲಿಯೇ ಥಳಿಸಿದ್ದಾರೆ. ಇದನ್ನೂ ಧನರಾಜ್ ಸೆರೆಹಿಡಿದಿದ್ದು ಬಳಿಕ ಧನರಾಜ್ ಬಸ್ನಿಂದ ಇಳಿದು ಶಾಲಾ ಶಿಕ್ಷಕರೊಂದಿಗೆ ಮಾತನಾಡಲು ಮತ್ತು ಶಾಲೆಯ ಗೇಟ್ನ ದೃಶ್ಯಗಳನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿರುವಾಗ ಕೆಲವು ಗೂಂಡಾಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಧನರಾಜ್ನನ್ನು ಸುತ್ತುವರಿದರು.
ಪ್ರೆಸ್ ಐಡಿ ಕಾರ್ಡ್ ಮತ್ತು ಮೊಬೈಲ್ ಪೋನ್ ಕಿತ್ತೆಗೆದು, ಮೊಬೈಲ್ ನಲ್ಲಿ ಸೆರೆಹಿಡಿದ ವಿಡಿಯೋಗಳನ್ನು ಡಿಲೀಟ್ ಮಾಡಿದ ನಂತರ ವಾಪಸ್ ನೀಡಿ ಈ ಪ್ರದೇಶಕ್ಕೆ ಬರದಂತೆ, ಮಾಧ್ಯಮಗಳಿಗೆ ಸುದ್ದಿ ನೀಡದಂತೆ ಬೆದರಿಕೆ ಹಾಕಿದ್ದಾರೆಂದು ದೂರಲಾಗಿದೆ.
ಕೆ.ಜೆ.ಯು (ಕೇರಳ ಜರ್ನಲಿಸ್ಟ್ ಯೂಸಿಯನ್) ರಾಜ್ಯ ಕಾರ್ಯದರ್ಶಿ ಪ್ರಮೋದ್ ಕುಮಾರ್ ರಾಜಪುರಂ, ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್, ಕಾರ್ಯದರ್ಶಿ ಸುರೇಶ್ ಕೂಕ್ಕಳ್, ಖಜಾಂಚಿ ಹಾಗೂ ಕುಂಬಳೆ ಪ್ರೆಸ್ ಪೋರಂ ಅಧ್ಯಕ್ಷ ಸುರೇಂದ್ರನ್ ಚೆಮೇನಿ, ಕಾರ್ಯದರ್ಶಿ ಐ. ಮುಹಮ್ಮದ್ ರಫೀಕ್, ಮಂಜೇಶ್ವರ ಪ್ರೆಸ್ ಕ್ಲಬ್ ಅಧ್ಯಕ್ಷ ರಹ್ಮಾನ್ ಉದ್ಯಾವರ, ಜತೆ. ಕಾರ್ಯದರ್ಶಿ ರತನ್ ಕುಮಾರ್ ಹೊಸಂಗಡಿ ಘಟನೆಯ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

