ಬೆಂಗಳೂರು ಬಳಿಕ ಮಲೆನಾಡು ಕಂಬಳಕ್ಕೆ ಭರದ ಸಿದ್ಧತೆ. 2025 ಏಪ್ರಿಲ್ 19, 20ರಂದು ಶಿವಮೊಗ್ಗದಲ್ಲಿ ಕರಾವಳಿಯ ಜಾನಪದ ಕ್ರೀಡೆ.
ಆಗಸ್ಟ್ 19, 2024
0
ಬೆಂಗಳೂರು ಬಳಿಕ ಮಲೆನಾಡು ಕಂಬಳಕ್ಕೆ ಭರದ ಸಿದ್ಧತೆ
- 2025 ಏಪ್ರಿಲ್ 19,20ರಂದು ಶಿವಮೊಗ್ಗದಲ್ಲಿ ಕರಾವಳಿಯ ಜಾನಪದ ಕ್ರೀಡೆ.
ಮಂಗಳೂರು: ಕರಾವಳಿಯ ಹೆಸರಾಂತ ಜಾನಪದ ಕ್ರೀಡೆ ಕಂಬಳ ಕಳೆದ ವರ್ಷ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನೆರವೇರಿದ ಬಳಿಕ ಇದೇ ಮೊದಲ ಬಾರಿಗೆ ಮಲೆನಾಡಿಗೂ ವಿಸ್ತರಿಸಲು ಸನ್ನದ್ಧವಾಗಿದ್ದು, ಅದಕ್ಕಾಗಿ ಈಗಲೇ ಪೂರಕ ಸಿದ್ಧತೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ, ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3181 ಮತ್ತು 3182 ಹಾಗೂ ಶಿವಮೊಗ್ಗ ಕಂಬಳ ಸಮಿತಿಯನ್ನು ರಚಿಸಿ ಇದರ ಸಹಯೋಗದೊಂದಿಗೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ 2025ರ ಏಪ್ರಿಲ್ 19 ಮತ್ತು 20ರಂದು ಆಯೋಜಿಸಲಾಗುವುದು ಎಂದು ದ.ಕ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರಾವಳಿ ಕರ್ನಾಟಕದ ಜಾನಪದ ಕ್ರೀಡೆಯನ್ನು ವಿಶ್ವ ಪಾರಂಪರಿಕ ತಾಣವಾದ ಶಿವಮೊಗ್ಗದಲ್ಲಿ ನಡೆಸಲು ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೇರಿದಂತೆ ಎಲ್ಲರ ಪೂರಕ ನೆರವು ಪಡೆಯಲಾಗುವುದು. ಶಿವಮೊಗ್ಗ, ಹಾಸನ, ಮಡಿಕೇರಿ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬೈಂದೂರು, ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಸಹಭಾಗಿತ್ವದಲ್ಲಿ ಅದ್ಧೂರಿಯಾಗಿ ಕಂಬಳ ನಡೆಸಲಾಗುವುದು ಎಂದರು.
ಕಂಬಳಕ್ಕೆ ಬೇಕಾದ ವ್ಯವಸ್ಥೆ ಬಗ್ಗೆ ನಮ್ಮ ತಂಡ ಶಿವಮೊಗ್ಗಕ್ಕೆ ತೆರಳಿ ಪರಿಶೀಲನೆ ನಡೆಸಲಿದೆ. ಅತ್ಯಂತ ಶಿಸ್ತುಬದ್ಧವಾಗಿ ನಡೆಯಲಿದೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಈ ಬಾರಿ 25 ಕಂಬಳ:
ಕರಾವಳಿಯಲ್ಲಿ ಈ ಬಾರಿ 25 ಕಂಬಳ ಆಯೋಜಿಸಲು ತೀರ್ಮಾನಿಸಲಾಗಿದೆ. ದಿನಾಂಕವನ್ನೂ ನಿಗದಿ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿಯ ಭಾಸ್ಕರ ಕೋಟ್ಯಾನ್, ಜಿ.ಆರ್. ಶೆಟ್ಟಿ, ಅರುಣ್ ಶೆಟ್ಟಿ, ರೋಟರಿಯ ಜಗನ್ನಾಥ್ ಕೋಟೆ, ರಾಜ್ ಗೋಪಾಲ ರೈ, ವಿಕ್ರಂ ದತ್ ವರ್ಕಾಡಿ, ಇಲಿಯಾಸ್ ಇದ್ದರು.




