ಕುತ್ತಾರಿನ ಕೊರಗಜ್ಜನಿಗೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಕುಟುಂಬಸ್ಥರಿಂದ ಹರಕೆ ಕೋಲ ; ಖ್ಯಾತ ನಟಿ ಕತ್ರಿನಾ ಕೈಫ್, ಕ್ರಿಕೆಟಿಗ ಕೆಎಲ್ ರಾಹುಲ್ ದಂಪತಿ ಭಾಗಿ.
ಜುಲೈ 15, 2024
0
ಕುತ್ತಾರಿನ ಕೊರಗಜ್ಜನಿಗೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಕುಟುಂಬಸ್ಥರಿಂದ ಹರಕೆ ಕೋಲ ; ಖ್ಯಾತ ನಟಿ ಕತ್ರಿನಾ ಕೈಫ್, ಕ್ರಿಕೆಟಿಗ ಕೆಎಲ್ ರಾಹುಲ್ ದಂಪತಿ ಭಾಗಿ.
ತೊಕ್ಕೊಟ್ಟು: ಕುತ್ತಾರು ಕೊರಗಜ್ಜನ ಆದಿ ಕ್ಷೇತ್ರದಲ್ಲಿ ನಿನ್ನೆ ನಡೆದ ಹರಕೆಯ ಕೋಲದಲ್ಲಿ ಬಾಲಿವುಡ್ ನ ಖ್ಯಾತ ನಟಿ ಕತ್ರಿನಾ ಕೈಫ್, ಕ್ರಿಕೆಟಿಗ ಕೆ.ಎಲ್ ರಾಹುಲ್ ಸೇರಿದಂತೆ ನಟ ಸುನಿಲ್ ಶೆಟ್ಟಿ ಕುಟುಂಬಸ್ಥರು ಭಾಗಿಯಾಗಿದ್ದಾರೆ. ನಟಿ ಕತ್ರಿನಾ ಕೈಫ್, ನಟ ಸುನಿಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆಧ್ಯಾ ಶೆಟ್ಟಿ, ಆಕೆಯ ಪತಿ ಕ್ರಿಕೆಟಿಗ ಕೆ.ಎಲ್.ರಾಹುಲ್, ಮ್ಯಾಟ್ರಿಕ್ಸ್ ಎಂಟರ್ ಟೈನ್ ಮೆಂಟ್ನ ರೇಷ್ಮಾ ಶೆಟ್ಟಿ, ಕತ್ರಿನಾ ಕೈಫ್ ಪತಿ ವಿಕಿ ಕೌಶಲ್ ಹಾಗೂ ವಿ.ಎಂ. ಕಾಮತ್ ಸೇರಿದಂತೆ ಒಟ್ಟು 9 ಮಂದಿ ಮಂಗಳೂರಿಗೆ ಆಗಮಿಸಿದ್ದರು. ಕುತ್ತಾರು ಮೂಲದ ಮುಂಬೈನ ಉದ್ಯಮಿಯೊಬ್ಬರು ಎರಡು ತಿಂಗಳ ಹಿಂದೆ ಕೊರಗಜ್ಜನ ಆದಿ ಕ್ಷೇತ್ರದಲ್ಲಿ ಹರಕೆ ಕೋಲ ಸೇವೆ ಬರೆಸಿದ್ದರು. ವಿಕಿ ಕೌಶಲ್ ಹೊರತುಪಡಿಸಿ ಉಳಿದೆಲ್ಲರೂ ಕೋಲದಲ್ಲಿ ಭಾಗಿಯಾಗಿದ್ದರು. ಕತ್ರಿನಾ, ರೇಷ್ಮಾ ಶೆಟ್ಟಿ ,ಆಧ್ಯಾ ಶೆಟ್ಟಿ ಕ್ಷೇತ್ರದ ಸಾಂಪ್ರದಾಯಿಕ ಕಟ್ಟುಪಾಡಿನಂತೆ ಕೋಲದಿಂದ ಹೊರಗುಳಿದು ಕಟ್ಟೆಯ ಕಚೇರಿಯಲ್ಲಿ ಉಳಿದುಕೊಂಡರೆ, ರಾಹುಲ್ ಮತ್ತು ಅಹಾನ್ ಶೆಟ್ಟಿ ಕೋಲದಲ್ಲಿ ಭಾಗಿಯಾಗಿದ್ದಾರೆ.
ನಿನ್ನೆ ಸಂಜೆ 6 ಗಂಟೆ ವೇಳೆಗೆ ಕುತ್ತಾರಿಗೆ ಆಗಮಿಸಿದ್ದ ಬಾಲಿವುಡ್ ಕುಟುಂಬ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಕೊರಗಜ್ಜನ ಕ್ಷೇತ್ರದ ಕಚೇರಿ ಪ್ರಮುಖರಲ್ಲಿ ಮನವಿ ಮಾಡಿದ್ದರು. ಅಲ್ಲದೇ ಸ್ಥಳದಲ್ಲಿ ಫೋಟೊ ತೆಗೆಯಲು ಬಿಡದೇ ತೆಗೆದವರನ್ನು ಅಳಿಸುವಂತೆ ವಿನಂತಿಸಿದ್ದಾರೆ. ಕ್ಷೇತ್ರದೊಳಗೆ ಬೆಳಕಿಲ್ಲದೆ ನಡೆಯುತ್ತಿದ್ದ ಕೊರಗಜ್ಜನ ಕೋಲವನ್ನು ಬಾಲಿವುಡ್ ಕುಟುಂಬ ವೀಕ್ಷಿಸಿ ತೆರಳಿದೆ.




