ಸ್ಥಳನಾಮಗಳ ಮಲಯಾಳೀಕರಣ: ಅಧ್ಯಯನಕ್ಕೆ ಪಂಚ ಸದಸ್ಯ ಸಮಿತಿ ನೇಮಿಸಿ ಗಡಿ ಪ್ರಾಧಿಕಾರ ಆದೇಶ.
ಮೇ 14, 2025
0
ಸ್ಥಳನಾಮಗಳ ಮಲಯಾಳೀಕರಣ: ಅಧ್ಯಯನಕ್ಕೆ ಪಂಚ ಸದಸ್ಯ ಸಮಿತಿ ನೇಮಿಸಿ ಗಡಿ ಪ್ರಾಧಿಕಾರ ಆದೇಶ.
ಕಾಸರಗೋಡು: ಕಾಸರಗೋಡು ಜಿಲ್ಲೆಯ ಕನ್ನಡ ನಾಮಾoಕಿತ ಪ್ರದೇಶ, ಗ್ರಾಮ, ಸ್ಥಳ ನಾಮಗಳನ್ನು ನಿರಂತರವಾಗಿ ಮಲಯಾಳೀಕರಣಗೊಳಿಸಲಾಗುತ್ತಿದ್ದು, ಈ ಗಂಭೀರ ಸಮಸ್ಯೆಯ ಬಗೆಗೆ ಅಧ್ಯಯನ ನಡೆಸಿ ಸೂಕ್ತ ಪರಿಹಾರ ಕಲ್ಪಿಸಲು ಕರ್ನಾಟಕ ರಾಜ್ಯ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ಸ್ಥಳ ನಾಮಗಳನ್ನು ಮಲಯಾಳೀಕರಣಗೊಳಿಸುತ್ತಿರುವ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಪ್ರಾಧಿಕಾರವು ಪಂಚ ಸದಸ್ಯರ ತಜ್ಞ ಸಮಿತಿಯನ್ನು ನಿಯೋಜಿಸಿದೆ. ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಆದೇಶ ನೀಡಲಾಗಿದೆ. ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾoಶುಪಾಲ ಪ್ರೊ. ಎ. ಶ್ರೀನಾಥ್, ನಿವೃತ್ತ ಉಪಜಿಲ್ಲಾಧಿಕಾರಿ ಕೆ. ಶಶಿಧರ ಶೆಟ್ಟಿ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಹಾಗೂ ಕವಿ, ಸಂಘಟಕ ಸುಂದರ ಬಾರಡ್ಕ ಅವರನ್ನು ಸಮಿತಿ ಸದಸ್ಯರನ್ನಾಗಿ ನಿಯೋಜಿಸಿ ಆದೇಶ ಹೊರಡಿಸಲಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೂ ಕನ್ನಡ ಸಂಘಟಕರೂ ಆಗಿರುವ ಎ. ಆರ್. ಸುಬ್ಬಯ್ಯಕಟ್ಟೆ ಅವರ ಮನವಿ ಮೇರೆಗೆ ಸಮಿತಿಯನ್ನು ಘೋಷಿಸಲಾಗಿದ್ದು, ಸಮಿತಿ ಚಟುವಟಿಕೆಗಳ ಮೇಲ್ನೋಟವನ್ನು ಎ. ಆರ್. ಸುಬ್ಬಯ್ಯಕಟ್ಟೆ ಅವರು ವಹಿಸುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ. ಸಮಿತಿಯ ಪ್ರಥಮ ಸಭೆಯು ನೀರ್ಚಾಲಿನಲ್ಲಿರುವ ಡಾ. ಮಲ್ಲಮೂಲೆ ಅವರ ನಿವಾಸ ಬನವಾಸಿಯಲ್ಲಿ ಜರಗಿ ಮುಂದಿನ ಕಾರ್ಯಯೋಜನೆಗಳಿಗೆ ರೂಪುರೇಷೆ ನೀಡಲಾಯಿತು.





