ಕನಿಲ ಪರಿಸರದಲ್ಲಿ "ಚಿರತೆ" ಪ್ರತ್ಯಕ್ಷ ವದಂತಿ.
ಮಾರ್ಚ್ 25, 2025
0
ಕನಿಲ ಪರಿಸರದಲ್ಲಿ "ಚಿರತೆ" ಪ್ರತ್ಯಕ್ಷ ವದಂತಿ.
ಮಂಜೇಶ್ವರ: ಹೊಸಂಗಡಿ ಬಳಿಯ ರಾಷ್ಟೀಯ ಹೆದ್ದಾರಿ ಪಕ್ಕವಿರುವ ಕನಿಲದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ವದಂತಿ ಹರಿದಾಡುತ್ತಿದೆ. ಇದರ ನಡುವೆ ಸ್ಥಳೀಯರಲ್ಲಿ ಆಶ್ಚರ್ಯದ ಜೊತೆಗೆ ಆತಂಕವೂ ಎದುರಾಗಿದೆ. ಕನಿಲದಲ್ಲಿ ಇದೀಗ ನವೀಕರಣಗೊಳ್ಳುತ್ತಿರುವ ಶ್ರೀ ಭಗವತೀ ಕ್ಷೇತ್ರ ಸಮೀಪ ಮೂರು ದಿನಗಳ ಹಿಂದೆ ಚಿರತೆಯೊಂದು ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ತಿಳಿಸುತ್ತಿದ್ದಾರೆ. ಸಂಜೆ 7 ಗಂಟೆ ವೇಳೆ ಆಟೋ ರಿಕ್ಷಾವೊಂದು ಆ ಭಾಗಕ್ಕೆ ಬಾಡಿಗೆಗೆ ತೆರಳಿದ ಸಂದರ್ಭದಲ್ಲಿ ಚಿಕ್ಕ ಮರಿ ಚಿರತೆಯನ್ನು ಹೋಲುವ ಪ್ರಾಣಿಯೊಂದು ಕ್ಷೇತ್ರ ಸಮೀಪ ಕಂಡುಬಂದಿರುವುದಾಗಿ ಚಾಲಕ ತಿಳಿಸಿದ್ದನು. ಆ ಕೂಡಲೇ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿ ವಿವಿಧೆಡೆ ಹುಡುಕಾಟ ನಡೆಸಿದ್ದರು. ಈ ವೇಳೆ ಚಿರತೆಯದ್ದೆಂದು ಅಂದಾಜಿಸಲಾದ ಹೆಜ್ಜೆ ಗುರುತು ಕ್ಷೇತ್ರ ಸಮೀಪ ಪತ್ತೆಯಾಗಿದೆ. ಆದರೆ ಹುಡುಕಾಟ ನಡೆಸಿದ ವೇಳೆ ಯಾವುದೇ ಪ್ರಾಣಿ ಕಾಣಿಸದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಈ ನಡುವೆ ಇದೆ ಪರಿಸರದ ಮನೆಯೊಂದರ ಸಾಕು ಬೆಕ್ಕಿನ ದೇಹದಲ್ಲಿ ಗಾಯಗಳುಂಟಾದ ಬಗ್ಗೆ ಮಾಹಿತಿಯಿದೆ. ಇದು ಚಿರತೆಮರಿ ಎರಗಿ ಗಾಯಗೊಳಿಸಿರಬಹುದೆಂದು ಅಂದಾಜಿಸಲಾಗಿದೆ. ಪರಿಸರ ಪ್ರದೇಶದಲ್ಲಿ ಹಂದಿಗಳ ಕಾಟ ಕೂಡಾ ಇವೆ. ಇದಲ್ಲದೆ ಒಂದು ವರ್ಷದ ಹಿಂದೆ ಕಾಡೆಮ್ಮೆ ಕೂಡಾ ಕಂಡುಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.


