ವಯನಾಡ್ ದುರಂತ ಪರಿಹಾರಕ್ಕಾಗಿ ಬಸ್ ಮಾಲಕರ ರಾಜ್ಯ ಸಂಘಟನೆ ಕರೆಯಂತೆ ಸರ್ವಿಸ್ ಬಸ್ ಗಳಲ್ಲಿ "ಕಾರುಣ್ಯ ಯಾತ್ರೆ".
ಆಗಸ್ಟ್ 22, 2024
0
ವಯನಾಡ್ ದುರಂತ ಪರಿಹಾರಕ್ಕಾಗಿ ಬಸ್ ಮಾಲಕರ ರಾಜ್ಯ ಸಂಘಟನೆ ಕರೆಯಂತೆ ಸರ್ವಿಸ್ ಬಸ್ ಗಳಲ್ಲಿ "ಕಾರುಣ್ಯ ಯಾತ್ರೆ".
ಮಂಜೇಶ್ವರ: ವಯನಾಡು ದುರಂತದ ಪರಿಹಾರಾರ್ಥ ಕೇರಳ ರಾಜ್ಯ ಬಸ್ಸು ಮಾಲಕರ ಸಂಘದ ಕರೆಯಂತೆ ಇಂದು ಒಂದು ದಿನ ಕೇರಳ ರಾಜ್ಯಾದ್ಯಂತ ಎಲ್ಲಾ ಸರ್ವಿಸ್ ಬಸ್ ಗಳಲ್ಲಿ ಕಾರುಣ್ಯ ಯಾತ್ರೆ ಕಾರ್ಯಕ್ರಮ ನಡೆಯುತ್ತಿದೆ. ಆ ಪ್ರಯುಕ್ತ ಮಂಜೇಶ್ವರ, ಉಪ್ಪಳ, ಕುಂಬಳೆ, ಕಾಸರಗೋಡು ರೂಟ್ ನ ಒಳ ಭಾಗದಲ್ಲಿ ಸಂಚರಿಸುವ ಎಲ್ಲಾ ಬಸ್ ಗಳಲ್ಲಿ, ರಾಷ್ಟ್ರೀಯ ಹೆದ್ದಾರಿ ತಲಪಾಡಿಯಿಂದ ಕಾಸರಗೋಡು ತನಕ ಸಂಚರಿಸುವ ಎಲ್ಲಾ ಬಸ್ ಗಳಲ್ಲಿ ಇಂದು ನಿರ್ವಾಹಕರು ಟಿಕೆಟ್ ಹಣ ಪಡೆಯದೆ, ಬಕೆಟ್ ಇಡಿದುಕೊಂಡು ಪ್ರಯಾಣಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆ. ಮಂಜೇಶ್ವರ ತಾಲ್ಲೂಕು ಬಸ್ ಮಾಲಕರ ಸಂಘದ ಆಶ್ರಯದಲ್ಲಿ ಹೊಸಂಗಡಿ ಪೇಟೆಯಲ್ಲಿ ಇಂದು ಬೆಳಗ್ಗೆ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೊಂತೆರೋ ಪತಾಕೆ ಹಾರಿಸಿ ಉದ್ಘಾಟಿಸಿ, ಬಳಿಕ ತಮ್ಮ ಕೈಯಿಂದಲೇ ಮೊದಲ ದೇಣಿಗೆ ಮೊತ್ತವನ್ನು ಬಸ್ ನಿರ್ವಾಹಕರ ಬಕೆಟ್ ಗೆ ಹಾಕುವ ಮೂಲಕ ಮಂಜೇಶ್ವರ ತಾಲ್ಲೂಕಿನ ಕಾರುಣ್ಯ ಯಾತ್ರೆಗೆ ಚಾಲನೆ ನೀಡಿದರು. ಯಕ್ಷ ಬಳಗ ಹೊಸಂಗಡಿಯ ಪ್ರಧಾನ ಸಂಚಾಲಕ ಸತೀಶ್ ಅಡಪ ಸಂಕಬೈಲು ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಅಬ್ದುಲ್ ಹಮೀದ್ ಹೊಸಂಗಡಿ, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯೆ ರಾಧಾ ಕನಿಲ, ವ್ಯಾಪಾರಿ ವ್ಯವಸಾಯ ಏಕೋಪನ ಸಮಿತಿ ಮಂಜೇಶ್ವರ ಘಟಕ ಅಧ್ಯಕ್ಷ ಬಷೀರ್ ಕನಿಲ, ಕಾಸರಗೋಡು ಜಿಲ್ಲಾ ಬಸ್ ಮಾಲಕರ ಸಂಘದ ಕೋಶಾಧಿಕಾರಿ ರಾಜೇಶ್ ಉದ್ಯಾವರ, ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘದ ಕೋಶಾಧಿಕಾರಿ ಉಮೇಶ್ ಶೆಟ್ಟಿ ಹೊಸಬೆಟ್ಟು,ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಸುಬ್ಬಣ್ಣ ಆಳ್ವ ಮೀಯಪದವು, ಪದಾಧಿಕಾರಿಗಳಾದ ಆರಿಫ್ ಎಸ್.ಎಸ್, ಚಂದ್ರಹಾಸ ಪೆಲಪ್ಪಾಡಿ, ಹಮೀದ್ ಎಸ್.ಕೆ, ಮೊದಲಾದವರು ಉಪಸ್ಥಿತರಿದ್ದರು. ರಾಜೇಶ್ ಉದ್ಯಾವರ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ವಂದಿಸಿದರು. ಬಾಯಾರುವಿನ ಕನಿಯಾಲದಲ್ಲಿ ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ
ಪೈವಳಿಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾಲಕ್ಷ್ಮಿ, ಸದಸ್ಯೆ ಶ್ರೀಮತಿ ಮಮತಾ ಪೂಜಾರಿ, ರಾಮಣ್ಣ ಬಂಗೇರ, ಕುವೆತ್ತೊಡಿಯ ವಿಷ್ಣು ಭಟ್, ಸುಬ್ರಹ್ಮಣ್ಯ ಮಾಸ್ಟರ್, ಒತ್ತರಬೈಲ್ ವಿನ ಅದ್ರಾಮ್ ಬ್ಯಾರಿ, ಕನಿಯಾಲದ ಅದಾಮ್, ರೆಡ್ ಸ್ಟಾರ್ ಕನಿಯಾಲದ ಹಸೈನಾರ್ ನಿಕ್ಕಿದ ಗುರಿ, ಪ್ರೆಂಡ್ಸ್ ಕನಿಯಾಲದ ಉದಯ ಗುತ್ತು, ಕನಿಯಾಲ ಶ್ರೀ ಶಾರದಾಂಬ ಭಜನಾ ಮಂಡಳಿಯ ಚಂದ್ರಶೇಖರ ಕಂಪದಮೂಲೆ ಚಾಲನೆ ನೀಡಿದರು. ಮೀಯಪದವಿನಲ್ಲಿ ಇಂದು ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ, ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಪಂಚಾಯತ್ ಸದಸ್ಯೆ ಶ್ರೀಮತಿ ರುಕೀಯ ಸಿದ್ದೀಕ್, ಬ್ಲಾಕ್ ಪಂಚಾಯತ್ ಸದಸ್ಯ ಕೆ.ವಿ ಭಟ್ ಚಾಲನೆ ನೀಡಿದರು. ಇಂದು ಬೆಳಗ್ಗೆಯಿಂದ ರಾತ್ರಿ ತನಕ ಸರ್ವಿಸ್ ಬಸ್ ಗಳಲ್ಲಿ ಯಾತ್ರೆ ಮಾಡುವ ಪ್ರಯಾಣಿಕರು ನೀಡುವ ಟಿಕೆಟ್ ದರವನ್ನು ರಾಜ್ಯದ ಎಲ್ಲಾ ಜಿಲ್ಲೆಯ ಪ್ರತಿಯೊಂದು ತಾಲೂಕಿನ ಬಸ್ ಸಂಘಟನೆಗಳಿಂದ ಸಂಗ್ರಹಿಸಿ, ಒಟ್ಟುಗೂಡಿಸಿ, ರಾಜ್ಯ ಸಮಿತಿಯ ಮೂಲಕ ಜಿಲ್ಲಾಧಿಕಾರಿಯವರ ಸಮ್ಮುಖದಲ್ಲಿ ವಯನಾಡಿನಲ್ಲಿ ನಡೆದ ದುರಂತ ಪರಿಹಾರಕ್ಕೆ ನೀಡಲಾಗುವುದು.








