ಮಂಜೇಶ್ವರ ಹೆದ್ದಾರಿ ಹೋರಾಟ ಮೂರನೇ ಹಂತಕ್ಕೆ.
ಆಗಸ್ಟ್ 12, 2024
0
ಮಂಜೇಶ್ವರ ಹೆದ್ದಾರಿ ಹೋರಾಟ ಮೂರನೇ ಹಂತಕ್ಕೆ.
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಮಂಜೇಶ್ವರ ಇದರ ಆಶ್ರಯದಲ್ಲಿ ಕಳೆದ 170 ದಿವಸಗಳಿಂದ ಮಂಜೇಶ್ವರದ ರಾಗಂ ಜಂಕ್ಷನ್ ನಲ್ಲಿ "ರಸ್ತೆ ದಾಟಲು ಸೌಕರ್ಯವಿಲ್ಲದ ಕಾರಣ ರಸ್ತೆಯ ಅಡಿಭಾಗದಲ್ಲಿ (ಅಂಡರ್ ಪಾಸ್ ಮೂಲಕ) ನಡೆದಾಡಲು ಬೇಕಾದ ಸೌಕರ್ಯ ಏರ್ಪಡಿಸಬೇಕು" ಎಂದು ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿಯ ಹೋರಾಟ ವೇದಿಕೆಯಲ್ಲಿ ನಡೆದ ಮೂರನೆಯ ಹಂತದ ಹೋರಾಟ ಘೋಷಣೆಯ ಉದ್ಘಾಟನೆಯನ್ನು ಮಂಜೇಶ್ವರ ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ಶ್ರೀ ರಾಜ ಬೆಲ್ಚಪ್ಪಾಡರವರು ಉದ್ಘಾಟಿಸಿದರು. ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ನಿರಂತರ ಹೋರಾಟದ ಫಲವಾಗಿ ಅಧಿಕೃತರು ಮಂಜೇಶ್ವರ ಜಂಕ್ಷನ್ ಗೆ ಮೇಲ್ ಸೇತುವೆ ನಿರ್ಮಾಣಕ್ಕೆ ಹಸಿರು ನಿಶಾಣೆ ತೋರಿಸಿದ್ದಾರೆ. ಆದರೆ ಮಂಜೇಶ್ವರ ಜನತೆಯ ಬೇಡಿಕೆಯು ಇದರಿಂದ ಪೂರ್ಣವಾಗುವುದಿಲ್ಲ. ವಯೋವೃದ್ದರಿಗೆ. ಅಂಗವಿಕಲರಿಗೆ, ರೋಗಿಗಳಿಗೆ, ರಸ್ತೆದಾಟಲು ಮೇಲ್ ಸೇತುವೆ ಪರಿಹಾರ ಅಲ್ಲ. ರಸ್ತೆಯ ಅಡಿಯಲ್ಲಿ ಅಂಡರ್ ಪಾಸ್ ಮೂಲಕ ನಡೆದು ರಸ್ತೆ ದಾಟುವ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿದೆ. ಇದರ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿರುವ ಅಧಿಕೃತರು ನೀಡುತ್ತಿರುವ ಹೇಳಿಕೆಗಳು, ಕಾರಣಗಳು ಬಾಲಿಶವಾಗಿದೆ ಎಂದು ಹೋರಾಟ ಸಮಿತಿಯು ಆರೋಪಿಸಿದೆ. ಮುಷ್ಕರದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಝಕರಿಯ ಶಾಲಿಮಾರ್ ವಹಿಸಿದ್ದರು. ಸಾಮಾಜಿಕ ಮುಂದಾಳುಗಳಾದ ಸಂಜೀವ ಶೆಟ್ಟಿ ಮಾಡ, ಹನಿಫಾ ಸುರಭಿ, ಯಾದವ ಬಡಜೆ, ಫಾರೂಕ್ ಉಸ್ಮಾನ್, ಮನೋಹರ ಮಂಜೇಶ್ವರ, ಝಕರಿಯ್ಯ ಆಟೋ, ಜಬ್ಬಾರ್ ಬಹರೈನ್, ಸಾದಿಕ್ ಮಂಜೇಶ್ವರ, ಮಜೀದ್ ಕುನ್ನಿಲ್, ಅಹಮ್ಮದ್ ನೈನಾರ್ ಮೊದಲಾದವರು ಮುಷ್ಕರಕ್ಕೆ ನೇತೃತ್ವ ನೀಡಿದರು. ಮೂರನೇ ಹಂತದ ಹೋರಾಟದ ಬಗ್ಗೆ ಎಸ್.ಎಮ್ ಬಶೀರ್ ಅಹಮ್ಮದ್ ವಿವರಿಸಿದರು. ನೈನಾರ್ ಮಂಜೇಶ್ವರ ಸ್ವಾಗತಿಸಿ, ಅಬ್ದುಲ್ ಲತಿಫ್ ಕುನ್ನಿಲ್ ಧನ್ಯವಾದವಿತ್ತರು.


