ಗುರು ಪೂರ್ಣಿಮೆಯಂಗವಾಗಿ ಸಂಸ್ಕಾರ ಭಾರತೀ ಮಂಗಳೂರು ಮಹಾನಗರ ವತಿಯಿಂದ ಗುರುವಂದನಾ ಕಾರ್ಯಕ್ರಮ ನಾಳೆ.
ಜುಲೈ 20, 2024
0
ಗುರು ಪೂರ್ಣಿಮೆಯಂಗವಾಗಿ ಸಂಸ್ಕಾರ ಭಾರತೀ ಮಂಗಳೂರು ಮಹಾನಗರ ವತಿಯಿಂದ ಗುರುವಂದನಾ ಕಾರ್ಯಕ್ರಮ ನಾಳೆ.
ಮಂಗಳೂರು: ಮಂಗಳೂರು ಸಂಸ್ಕಾರ ಭಾರತೀಯು ಕಳೆದ 20 ವರ್ಷಗಳಿಂದ ಗುರುಪೂರ್ಣಿಮೆಯಂದು ನಾಡಿನ ಹಲವಾರು ಹಿರಿಯ ಕಲಾವಿದರು ಕಲಾ ಸಂಘಟಕರು ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸುತ್ತಾ ಬಂದಿದ್ದು,
ಪ್ರಸ್ತುತ ಈ ವರ್ಷ ಐವರು ಹಿರಿಯ ಸಾಧಕರನ್ನು ಅವರ ನಿವಾಸಕ್ಕೆ ತೆರಳಿ ಗುರುನಮನ ಸಲ್ಲಿಸಲು ನಿರ್ಧರಿಸಲಾಗಿದೆ.
ಈ ಬಾರಿ ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಜ್ಞಾತ ಕಲಾವಿದರು, ಶ್ರೇಷ್ಠ ಕಲಾಗುರುಗಳನ್ನು ಗುರುತಿಸಿ ಅವರು ಇರುವಲ್ಲಿಗೇ ತೆರಳಿ ಆತ್ಮೀಯವಾಗಿ ಅಭಿನಂದಿಸಿ ಸತ್ಕರಿಸುವ ಕಾರ್ಯಕ್ರಮವನ್ನು ಸಂಘಟಕರು ಆಯೋಜಿಸಿದ್ದು, ವಿಶೇಷವಾಗಿದೆ. ಸಾಧಕರ ವಿವರ ಈ ಕೆಳಗಿನಂತಿದೆ. ಕಾಯಕದಲ್ಲಿ ಮೆಕ್ಯಾನಿಕ್ ಹುದ್ದೆಯನ್ನು ಆಶ್ರಯಿಸಿ, ಗಾಯನ - ಭಜನಾ ಸಂಕೀರ್ತನದಲ್ಲಿ ಭಾಗಿಯಾಗಿ, ನಾಟಕ ರಚನಾಕಾರರಾಗಿ, ಸಾಹಿತ್ಯ, ಹಿನ್ನೆಲೆ ಗಾಯನ ಹಾಗೂ ನಿರ್ದೇಶನದೊಂದಿಗೆ ನಟನಾ ಚಾತುರ್ಯವನ್ನು ಹೊಂದಿ, ಓದುವ ಹವ್ಯಾಸವನ್ನು ಮೈಗೂಡಿಸಿ ಪ್ರಸ್ತುತ ನಿವೃತ್ತಿಯ ಈ ಹೊತ್ತಿನಲ್ಲಿ ಸಂಗೀತಾಸಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಗೀತ ತರಬೇತಿಯನ್ನು ನೀಡಿ, ಯಾವುದೇ ಫಲಾಪೇಕ್ಷೆಯನ್ನು ಬಯಸದೆ ನಿಷ್ಠೆ- ಶೃದ್ಧಾ - ಭಕ್ತಿಯನ್ನು ಮೈಗೂಡಿಸಿರುವ ಬಿ. ಭೋಜ ಸುವರ್ಣ, ಬರ್ಕೆ- ಸಂಗೀತ, ಸಾಹಿತ್ಯ (84 ವರ್ಷ), ಬಾಲ್ಯದಲ್ಲಿಯೇ ಚಿತ್ರಕಲೆಯಲ್ಲಿ ಆಸಕ್ತರಾಗಿ ಉಡುಪಿಯ ಚಿತ್ರಕಲಾ ಮಂದಿರದಲ್ಲಿ ಚಿತ್ರಕಲೆಯನ್ನು ಕರಗತೊಳಿಸಿ ಯಂ.ಸಿ.ಯಫ್. ಭಾರತ್ ಬೀಡೀಸ್ ಮುಂತಾದೆಡೆ ಚಿತ್ರಕಲಾ ಪ್ರದರ್ಶನವನ್ನು ಕೈಗೊಂಡು. ಕೆ.ಯಂ.ಸಿ.. ಕಂಕನಾಡಿ ಫಾದರ್ ಮುಲ್ಲರ್ಸ್ ಮುಂತಾದ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಸ್ತ್ರ ಚಿಕಿತ್ಸೆಗೆ ಸಂಬಂದಿತ ಚಿತ್ರಗಳನ್ನು ಬಿಡಿಸಿ ಮೆಡಿಕಲ್ ಚಾರ್ಟನ್ನು ತಯಾರಿಸುವ ನೈಪುಣ್ಯತಯನ್ನು ಹೊಂದಿರುವಿರಲ್ಲದೇ, ತನ್ನ ಮೂರು ಮಕ್ಕಳಿಗೂ ಚಿತ್ರಕಲೆಯ ಮಜಲುಗಳನ್ನು ಪರಿಚಯಿಸಿ. ಲೇಡಿಗೋಷನ್ ಬೇರೀಸ್ ಪಬ್ಲಿಕ್ ಶಾಲೆ, ಬೋಳಾರದ ಅಮೃತ ವಿದ್ಯಾಯಲಯ, ಜಪ್ಪುವಿನ ಸಂತ ಜೆರೋಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿತ್ರಕಲಾ ತರಬೇತುದಾರರಾಗಿ ಕೆಲಸ ನಿರ್ವಹಿಸಿದ ಕೆ. ಚಂದ್ರಯ್ಯ ಆಚಾರ್ಯ - ಚಿತ್ರಕಲೆ (81 ವರ್ಷ) ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿ, ಪಾಣಾಜೆಯಲ್ಲಿ ಶಾಖೆಯನ್ನು ಆರಂಭಿಸಿ, ಶಿಕ್ಷಕರ ಜೊತೆಗೆ ಸಾಂಸ್ಕೃತಿಕ ಮಂಡಳಿಯನ್ನು ಸ್ಥಾಪಿಸಿ ಕಾರ್ಯದರ್ಶಿಯಾಗಿ ನಿಭಾಯಿಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಟುವಟಿಕೆಯಲ್ಲಿ ತೊಡಗಿ ಜಿಲ್ಲಾ ಉಪಾಧ್ಯಕ್ಷರಾಗಿ, ಶಿಕ್ಷಕರ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಯಾಗಿ, ಪ್ರಾಥಮಿಕ ಶಾಲಾ ಅಧ್ಯಾಪಕರಾಗಿ, ತುರ್ತು ಪರಿಸ್ಥಿತಿಯಲ್ಲಿ ಭೂಗತ ಕಾರ್ಯಕರ್ತರಾಗಿ, ಸಂಘದ ಚಟುವಟಿಕೆಯಲ್ಲಿ ನಿರತರಾಗಿ, ಶಾರದಾ ಸಂಸ್ಕಾರ ಕೇಂದ್ರ ಹಾಗೂ ಮಾತೃ ಮಂಡಳಿಯ ಸ್ಥಾಪಕರಾಗಿ, ಸಾಂಸ್ಕೃತಿಕ ಹಾಗೂ ರಾಷ್ಟ್ರ ಚಿಂತಕರೂ ಆದ ಪಂಡಿತ್ ಶ್ರೀ ರಾಮರಾವ್ - ಸಮಾಜಸೇವೆ (82 ವರ್ಷ), ನಾಟಿ ವಿದ್ಯೆಯನ್ನು ಹಿರಿಯ ಪಂಡಿತರಾದ ತಂದೆ ತನಿಯ ಪೂಜಾರಿಯವರಿಂದ ಪ್ರೇರಿತಗೊಂಡು, ಬಾಲ್ಯದಲ್ಲಿಯೇ ಆಸಕ್ತಿಯಿಂದ ನೋಡಿ. ಕಲಿತು ಕೋರ, ಕೋಟಲೆ, ಹಳದಿರೋಗ, ಹೊಟ್ಟೆನೋವು, ಕೈಕಾಲು ಊತ ಮುಂತಾದ ಸಂಕಷ್ಟಕ್ಕೆ ಒಳಗಾದವರಿಗೆ ನಾಟಿ ಮದ್ದನ್ನು ನೀಡಿ ಗುಣಮುಖಗೊಳಿಸಿರುವುದಲ್ ದೆ ಜಾನುವಾರುಗಳಿಗೆ ಎಲ್ಲಾ ರೀತಿಯ ಗಿಡಮೂಲಿಕೆಗಳಿಂದ ಮದ್ದನ್ನು ತಯಾರಿಸಿ, ನಿಷ್ಣಾತರೆನಿಸಿ ಜನರ ವಿಶ್ವಾಸಕ್ಕೆ ಪಾತ್ರರಾಗಿರುವ ಶ್ರೀಮತಿ ಗಿರಿಜಾ ನಾಟಿ ವೈದ್ಯ (77 ವರ್ಷ), ಯಕ್ಷಗಾನದ ಹವ್ಯಾಸಿ ವೇಷಧಾರಿ ಹಾಗೂ ಭಾಗವತರಾಗಿ ನಾಟಕ ಪ್ರಸಾಧನ ಕಲಾವಿದರಾಗಿ, ನಟರಾಗಿ, ಹುಲಿವೇಷದ ಬಣ್ಣಗಾರಿಕೆ ಕಲಾವಿದರಾಗಿ ವಿವಿಧ ಮೃಗಗಳ ಮುಖವಾಡ ತಯಾರಿಕೆಯಲ್ಲಿ ತೊಡಗಿ, ಸಿಂಹನೃತ್ಯದ ವೇಷಭೂಷಣ ತಯಾರಿಕೆಯಲ್ಲಿ ನಿಷ್ಣಾತರಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿ ಜನಮನ್ನಣೆಗೊಂಡಿರುವ ಜಿ.ನಾರಾಯಣ ಹೊಳ್ಳ- ಯಕ್ಷಗಾನ - ಪ್ರಸಾಧನ (74 ವರ್ಷ) ಇವರುಗಳಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು, ಧಾರ್ಮಿಕ ಮುಖಂಡರು, ಸಮಾಜ ಸೇವಕರು, ಜನ ಪ್ರತಿನಿಧಿಗಳು ಮತ್ತು ಸಂಘಟನೆಯ ಪ್ರಮುಖರು ಅವರ ನಿವಾಸಕ್ಕೆ ತೆರಳಿ ಗುರುನಮನ ಸಲ್ಲಿಸಲಾಗುವುದು. ನಿಟ್ಟೆ ವಿದ್ಯಾಸಂಸ್ಥೆ ವತಿಯಿಂದ ನಗದು ಪುರಸ್ಕಾರ ಹಾಗೂ ಸನ್ಮಾನ ಪತ್ರ ನೀಡಲಾಗುವುದು.






