ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಹಿನ್ನೆಲೆಯಲ್ಲಿ, ಮಂಜೇಶ್ವರ ಹಿಂದೂ ಸಂಗಮ ಆಯೋಜನಾ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಎಸ್.ಎ.ಟಿ. ಶಾಲಾ ಮೈದಾನದಲ್ಲಿ ವಿರಾಟ್ ಹಿಂದೂ ಸಂಗಮ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭನೆಯಿಂದ ಜರಗಿತು.
ಸಭಾ ಕಾರ್ಯಕ್ರಮದಲ್ಲಿ ಮಂಜೇಶ್ವರ ಹಿಂದೂ ಸಂಗಮದ ಅಧ್ಯಕ್ಷರಾದ ಮೋಹನ್ ಶೆಟ್ಟಿ ತೂಮಿನಾಡು ಅಧ್ಯಕ್ಷತೆ ವಹಿಸಿದ್ದರು. ದೀಪ ಪ್ರಜ್ವಲನ ಗೈದು ಆಶೀರ್ವಚನ ನೀಡಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ 'ಹಿಂದುತ್ವ, ಹಿಂದೂ ಧರ್ಮ ಸದೃಢವಾಗಬೇಕಾದರೆ ಹಿಂದೂ ಸಮಾಜ ಸಂಘಟಿತ ಶಕ್ತಿಯಾಗಬೇಕು. ಸುಸಂಘಟಿತ ಹಿಂದೂ ಸಮಾಜದಿಂದ ಮಾತ್ರ ಈ ರಾಷ್ಟ್ರ ಪರಮವೈಭವ ಸ್ಥಿತಿಗೆ ತಲುಪಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಸಮಸ್ತ ಹಿಂದೂ ಸಮಾಜ 'ನಾವೆಲ್ಲರೂ ಹಿಂದೂಗಳು' ಎಂಬ ಏಕತಾಭಾವನೆಯಿಂದ ಒಂದಾಗಬೇಕು ಎಂದು ಕರೆ ನೀಡಿದರು. ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಹಿಂದುತ್ವದ ಪ್ರಖರ ವಾಗ್ಮಿ, ನ್ಯಾಯವಾದಿ ಸಹನಾ ಕುಂದರ್ ಸೂಡ ಮಾತನಾಡಿ, ನಮ್ಮ ಬದುಕು ಈ ರಾಷ್ಟ್ರಕ್ಕೆ ಸಮರ್ಪಿತವಾಗಲಿ. ಈ ರಾಷ್ಟ್ರದ ಅಂತ:ಶಕ್ತಿಯಾದ ಸನಾತನವಾದ ಪರಂಪರೆ, ಸಂಸ್ಕೃತಿ, ಆಚಾರ- ವಿಚಾರಗಳನ್ನು ಇನ್ನಷ್ಟು ಸಂಪತ್ಭರಿತಗೊಳಿಸೋಣ. ಈ ರಾಷ್ಟ್ರದ,
ಸನಾತನ ಹಿಂದೂ ಧರ್ಮದ ರಕ್ಷಣೆ ನಮ್ಮೆಲ್ಲರ ಪ್ರಥಮಾದ್ಯತೆಯಾಗಿರಲಿ ಎಂದು ಹೇಳಿದರು. ಮಂಜೇಶ್ವರ ಹಿಂದೂ ಸಂಗಮ ಸಮಿತಿಯ ಗೌರವಾಧ್ಯಕ್ಷರಾದ ನಿವೃತ್ತ ನೌಕಾದಳ ಕಮಾಂಡರ್, ವಿಜಯ ಕುಮಾರ್ ಕಣ್ವತೀರ್ಥ ಸಂದರ್ಭೋಚಿತವಾಗಿ ಸದಾಶಯದ ಮಾತುಗಳನ್ನಾಡಿದರು.
ಮಂಜೇಶ್ವರ ಹಿಂದೂ ಸಂಗಮದ ರಕ್ಷಾಧಿಕಾರಿ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ಬಡಾಜೆಬೂಡು, ಮಾತೃ ಶಕ್ತಿ ಸಂಚಾಲಕಿ ಶಶಿಕಲಾ ಮಾಡ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮಾಜದ ಮುಂದಿಟ್ಟಿರುವ ಪಂಚ ಪರಿವರ್ತನೆಗಳ ಮಹತ್ವ ಹಾಗೂ ಹಿಂದೂ ಸಮಾಜಕ್ಕೆ ಎದುರಾಗಿರುವ ಸವಾಲುಗಳು- ಉತ್ತರಗಳನ್ನೊಳಗೊಂಡ ಕರಪತ್ರವನ್ನು ಪೂಜ್ಯ ಸ್ವಾಮೀಜಿಗಳು ಅನಾವರಣಗೊಳಿಸಿದರು.
ತಾಯಂದಿರು,ಭಗಿನಿಯರನ್ನೊಳಗೊಂಡಂತೆ ಶತಕಂಠ ವಂದೇ ಮಾತರಂ ಗಾಯನದೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭಗೊಂಡಿತು. ಹಿಂದೂ ಸಂಗಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಮಾಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದೂ ಸಂಗಮ ಸಮಿತಿ ಸಂಯೋಜಕರಾದ ಮಹಾಬಲೇಶ್ವರ ವಂದಿಸಿದರು. ಈಶ್ವರ್ ಕಿದೂರು ಹಾಗೂ ಶೈಲೇಶ್ ಸ್ಫೂರ್ತಿನಗರ ಕಾರ್ಯಕ್ರಮ ನಿರೂಪಿಸಿದರು. ಭಾರತ ಮಾತೆಗೆ ಪುಷ್ಪಾರ್ಚನೆ ಕಾರ್ಯಕ್ರಮವೂ ವೇದಿಕೆಯಲ್ಲಿ ಜರಗಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಅನಾವರಣಗೊಂಡ ಕುಣಿತ ಭಜನಾ ತಂಡಗಳ ಸಾಮೂಹಿಕ ಕುಣಿತ ಪ್ರದರ್ಶನ, ಹುಲಿ ವೇಷಧಾರಿಗಳ ನೃತ್ಯಪ್ರದರ್ಶನ, ಆದರ್ಶ ವ್ಯಕ್ತಿತ್ವಗಳ ಅಭಿನಯ ಪ್ರದರ್ಶನ ಹಾಗೂ ವೇದಪಟುಗಳಿಂದ ವೇದ ಮಂತ್ರಗಳ ಉದ್ಘೋಷಗಳು ಗಮನ ಸೆಳೆಯಿತು.
ಭವ್ಯ ಶೋಭಾಯಾತ್ರೆ
ಇದಕ್ಕೂ ಮೊದಲು ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನ ವಠಾರದಿಂದ ಹೊರಟ ಬೃಹತ್ ಶೋಭಾಯತ್ರೆಗೆ ದೇವಸ್ಥಾನದ ಅಧ್ಯಕ್ಷರಾದ ಟಿ. ಗಣಪತಿ ಪೈ ಅವರು ಸಂಗಮ ಸಮಿತಿಯ ಅಧ್ಯಕ್ಷರಾದ ಮೋಹನ ಶೆಟ್ಟಿ ತೂಮಿನಾಡು ಅವರಿಗೆ ಭಗವಾದ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು ಪಾಲ್ಗೊಂಡಿದ್ದ ಈ ಶೋಭಾಯಾತ್ರೆಯಲ್ಲಿ ವಿವಿಧ ಬಾಲ ಗೋಕುಲ ಹಾಗೂ ಸಂಘ ಸಂಸ್ಥೆಗಳ ಮಕ್ಕಳಿಂದ ಕುಣಿತ, ಆದರ್ಶ ವ್ಯಕ್ತಿತ್ವಗಳ ವೇಷ -ಭೂಷಣಗಳು, ತುಳುನಾಡಿನ ಸಾಂಪ್ರದಾಯಿಕ ಕಲೆಯಾಗಿರುವ ಹುಲಿ ವೇಷ ನೃತ್ಯಗಳು ವಿಶೇಷ ಆಕರ್ಷಣೆಯಾಗಿದ್ದವು.
ಸಭಾ ಕಾರ್ಯಕ್ರಮದ ಬಳಿಕ ಸನಾತನ ಭಾರತೀಯ ಪರಂಪರೆ, ಸಂಸ್ಕೃತಿ, ಆಚಾರ- ವಿಚಾರಗಳನ್ನು ಪ್ರತಿಬಿಂಬಿಸುವ ಚಂದ್ರಹಾಸ್ ಮುಗುಳ್ಯ ಸಾರಥ್ಯದ ದತ್ತಾಂಜನೇಯ ಕಲಾಬಳಗ ಕಣ್ವತೀರ್ಥದ ಕಲಾವಿದರಿಂದ ಭರತ ವೈಭವ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.
