ಮಂಜೇಶ್ವರ: ಹೊಸಂಗಡಿ ಪೇಟೆಯ ರೈಲ್ವೇ ಹಳಿ ಬಳಿ ಕಾರ್ಯಾಚರಿಸುತ್ತಿದ್ದ ಹಳೆಯ ಹೋಟೆಲ್ ಗಳಲ್ಲೊಂದಾದ ಸಂಗಂ ಹೋಟೇಲಿನ ಮಾಜಿ ಮಾಲಕ ಬಿ. ಎಂ. ಮಾಧವ ಸಂಗಮ್ (74) ಅಸೌಖ್ಯ ನಿಮ್ಮಿತ ನಿನ್ನೆ ರಾತ್ರಿ ನಿಧನರಾದರು. ಸಂಬಂಧಿ ಬಿ. ಎಂ. ನಾರಾಯಣರ ಬಳಿಕ ಹೊಸಂಗಡಿಯ ಜನಪ್ರಿಯವಾದ ಸಂಗಮ್ ಹೋಟೇಲನ್ನು ಮತ್ತಷ್ಟು ಜನಪ್ರಿಯತೆಯಿಂದ ಅವರು ನಡೆಸುವಲ್ಲಿ ಯಶಸ್ವಿಯಾಗಿದ್ದರು. ಹೊಸಂಗಡಿರ ಪಾಲಿಗೆ ಇದೊಂದು ಕೇವಲ ಉಪಾಹಾರ ಗೃಹವಷ್ಟೇ ಆಗದೇ ನಾಡಿನ ಸಾಮಾಜಿಕ ವಿಷಯಗಳ ಸಂವಾದ ಕೇಂದ್ರವೂ ಆಗಿತ್ತು. ಅಧಿಕಾರ ಸ್ಥಾನಮಾನಗಳ ಬಯಕೆಯಿಲ್ಲದೇ ನಾಡಿನ ದೈವಸ್ಥಾನ, ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಅವರು ಬಂಗ್ರಮಂಜೇಶ್ವರ ಕೊಟ್ಟಗಂ ಬಂಗೇರ ತರವಾಡಿನ ಗೌರವ ಸಲಹೇಗಾರ, ರಾಮತ್ತಮಜಲ್ ಸಾರ್ವಜನಿಕ ರುದ್ರಭೂಮಿ ಅಭಿವೃದ್ಧಿ, ಕನಿಲ ಶ್ರೀ ಭಗವತಿ ಕ್ಷೇತ್ರ ಬ್ರಹ್ಮಕಲಶ ಸಮಿತಿ ಸೇರಿದಂತೆ ನಾಡಿನ ರಾಜಕೀಯ, ಸಾಮಾಜಿಕ ಚಟುವಟಿಕೆಗಳಲ್ಲಿ ಹಿರಿಯರಾಗಿ ಪಾಲ್ಗೊಳ್ಳುತ್ತಿದ್ದರು. ಸಿಪಿಐಎಂ ಮಂಜೇಶ್ವರ ಲೋಕಲ್ ಕಮಿಟಿಯ ಹಿರಿಯ ಸದಸ್ಯರಾಗಿದ್ದರು. ತನ್ನ ಮಾವನಿಂದ ಬಳುವಳಿಯಾಗಿ ಬಂದ ಸಂಗಮ್ ಹೋಟೆಲನ್ನು ನಾಡಿನ ಜನರೆಲ್ಲರ ಒಲುಮೆಯ ಒಗ್ಗೂಡುವಿಕೆಯ ತಾಣವನ್ನಾಗಿಸುವಲ್ಲಿ ಮಾಧವರವರ ಬಹುಮುಖಿ ಕಾರ್ಯಾಸಕ್ತಿಯೇ ಕಾರಣವಾಗಿತ್ತು. ಮೃತರು ಪತ್ನಿ ವೇದಾವತಿ, ಮಕ್ಕಳಾದ ವಿನಯಕುಮಾರ್, ಸಂತೋಷ್, ಸಂದೀಪ್, ಚೇತನಕುಮಾರಿ, ಮೊಮ್ಮಕ್ಕಳಾದ ಸುನೀತ, ವಿನಯಕುಮಾರ, ಹಾಗೂ ಸಹೋದರಿ ಲೀಲಾವತಿ, ಸೋದರ ದೇವರಾಜ ಸಹಿತ ನಾಡಿನ ಅನೇಕ ಬಂಧುಮಿತ್ರರನ್ನು ಅಗಲಿದ್ದಾರೆ.
8:10:45
