ಹಿರಿಯ ಪತ್ರಕರ್ತ, ಸಂಘಟಕ, ಸಾಹಿತಿ, ನಿರೂಪಕ ರವಿ ನಾಯ್ಕಾಪು ಅವರಿಗೆ "ಗಡಿನಾಡ ಸಾಹಿತ್ಯ ಭೂಷಣ" ಪ್ರಶಸ್ತಿ ಪ್ರದಾನ.
ಆಗಸ್ಟ್ 04, 2025
0
ಹಿರಿಯ ಪತ್ರಕರ್ತ, ಸಂಘಟಕ, ಸಾಹಿತಿ, ನಿರೂಪಕ ರವಿ ನಾಯ್ಕಾಪು ಅವರಿಗೆ "ಗಡಿನಾಡ ಸಾಹಿತ್ಯ ಭೂಷಣ" ಪ್ರಶಸ್ತಿ ಪ್ರದಾನ.
ಕುಂಬಳೆ: ಕಾಸರಗೋಡಿನ ಹಿರಿಯ ಪತ್ರಕರ್ತ, ಲೇಖಕ ರವಿ ನಾಯ್ಕಾಪು ಅವರಿಗೆ 'ಗಡಿನಾಡ ಸಾಹಿತ್ಯ ಭೂಷಣ ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರಿನ ತಾಯಿಬೇರು ಸಾಮಾಜಿಕ ಮತ್ತು ಸಾಂಸ್ಕೃತಿಕ ಯುವವೇದಿಕೆಯು ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಯನ್ನು ಬೆಂಗಳೂರು ರಾಜರಾಜೇಶ್ವರಿ ನಗರದ ಕೆ. ಕೆ. ಸಭಾಂಗಣದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜರಗಿದ ದೇಸಿ ಸಂಸ್ಕೃತಿ ಸೌರಭ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಕರ್ನಾಟಕ ಸರಕಾರದ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಡಾ. ಗೋವಿಂದ ಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಕೆ. ಕೆ. ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕೆ. ಕುಂಬಣ್ಣ ಅವರು ಅಧ್ಯಕ್ಷತೆ ವಹಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ, ಪ್ರಾಧ್ಯಾಪಕ ಡಾ. ಎಚ್. ಲಕ್ಷ್ಮೀನಾರಾಯಣ ಸ್ವಾಮಿ, ಖ್ಯಾತ ನಿರೂಪಕಿ ಸೌಮ್ಯಾ ಗೌಡ, ವಿದುಷಿ ಪದ್ಮಜಾ ಜಯರಾಮ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ತಾಯಿಬೇರು ಸಾಮಾಜಿಕ ಮತ್ತು ಸಾಂಸ್ಕೃತಿಕ ಯುವವೇದಿಕೆ ಕಾರ್ಯದರ್ಶಿ ಡಾ. ಕೆ. ಎನ್. ನಾಗೇಶ್ ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು. ಸಂಘಟನೆ ಅಧ್ಯಕ್ಷ ಎ. ಜಗದೀಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರಗಿದವು. ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


