ವಯನಾಡ್ ದುರಂತ ಪರಿಹಾರಕ್ಕಾಗಿ ಕೇರಳ ರಾಜ್ಯಾದ್ಯಂತ ಎಲ್ಲಾ ಸರ್ವಿಸ್ ಬಸ್ ಗಳಲ್ಲಿ ನಾಳೆ ಬೆಳಗ್ಗಿನಿಂದ ರಾತ್ರಿ ತನಕ "ಕಾರುಣ್ಯ ಯಾತ್ರೆ".
ಆಗಸ್ಟ್ 21, 2024
0
ವಯನಾಡ್ ದುರಂತ ಪರಿಹಾರಕ್ಕಾಗಿ ಕೇರಳ ರಾಜ್ಯಾದ್ಯಂತ ಎಲ್ಲಾ ಸರ್ವಿಸ್ ಬಸ್ ಗಳಲ್ಲಿ ನಾಳೆ ಬೆಳಗ್ಗಿನಿಂದ ರಾತ್ರಿ ತನಕ "ಕಾರುಣ್ಯ ಯಾತ್ರೆ".
ಮಂಜೇಶ್ವರ: ಕೇರಳ ರಾಜ್ಯ ಬಸ್ಸು ಮಾಲಕರ ಸಂಘದ ಕರೆಯಂತೆ ನಾಳೆ ಒಂದು ದಿನ ಕೇರಳ ರಾಜ್ಯಾದ್ಯಂತ ಎಲ್ಲಾ ಸರ್ವಿಸ್ ಬಸ್ ಗಳಲ್ಲಿ ಕಾರುಣ್ಯ ಯಾತ್ರೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆಯಿಂದ ರಾತ್ರಿ ತನಕ ಸರ್ವಿಸ್ ಬಸ್ ಗಳಲ್ಲಿ ಯಾತ್ರೆ ಮಾಡುವ ಪ್ರಯಾಣಿಕರು ನೀಡುವ ಟಿಕೆಟ್ ದರವನ್ನು ರಾಜ್ಯದ ಎಲ್ಲಾ ಜಿಲ್ಲೆಯ ಪ್ರತಿಯೊಂದು ತಾಲೂಕಿನ ಬಸ್ ಸಂಘಟನೆಗಳಿಂದ ಸಂಗ್ರಹಿಸಿ, ಒಟ್ಟುಗೂಡಿಸಿ, ರಾಜ್ಯ ಸಮಿತಿಯ ಮೂಲಕ ವಯನಾಡಿನಲ್ಲಿ ನಡೆದ ದುರಂತ ಪರಿಹಾರಕ್ಕೆ ನೀಡಲಾಗುವುದು. ಆದ್ದರಿಂದ ನಾಳೆ ಬಸ್ ಮಾಲಕರ ನಿರ್ದೇಶನದಲ್ಲಿ ನಡೆಯುವ ಕಾರುಣ್ಯ ಯಾತ್ರೆಯಲ್ಲಿ ಟಿಕೆಟ್ ದರ ಹೊರತುಪಡಿಸಿ, ಈ ಮಹತ್ಕಾರ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಪ್ರಯಾಣಿಕರು ನೀಡಬಹುದು ಎಂದು ಮಂಜೇಶ್ವರ ತಾಲ್ಲೂಕು ಬಸ್ ಮಾಲಕರ ಸಂಘದ ಅಧ್ಯಕ್ಷ ತಿಮ್ಮಪ್ಪ ಭಟ್ ಅರಂತಾಡಿ "ನಮ್ಮ ಮಂಜೇಶ್ವರ ನ್ಯೂಸ್" ಗೆ ಮಾಹಿತಿ ನೀಡಿದ್ದಾರೆ. ನಾಳೆ ನಡೆಯುವ ಕಾರುಣ್ಯ ಯಾತ್ರೆಯಲ್ಲಿ ಸಾರ್ವಜನಿಕರು ತಮ್ಮ ತಮ್ಮ ವಾಹನಗಳಲ್ಲಿ ತೆರಳದೆ, ತಮ್ಮ ವಾಹನಗಳನ್ನು ಬದಿಗಿಟ್ಟು ಬಸ್ಸಿನಲ್ಲಿ ಪ್ರಯಾಣಿಸಿ, ಬಸ್ ಮಾಲಕರ ಸೇವಾ ಕಾರ್ಯಕ್ಕೆ ಕೈ ಜೋಡಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ. ನಾಳೆ ಕೇರಳ ರಾಜ್ಯಾದ್ಯಂತ ಬಸ್ ಯಾತ್ರೆಯಲ್ಲಿ ಸಂಗ್ರಹಿಸಿ ಬಂದ ಎಲ್ಲಾ ಆದಾಯವನ್ನು ಜಿಲ್ಲಾಧಿಕಾರಿಯವರ ಸಮ್ಮುಖದಲ್ಲಿ ವಯನಾಡು ಸಂತ್ರಸ್ತರಿಗೆ ಅತೀ ಶೀಘ್ರದಲ್ಲೇ ನೀಡಲು ಕೇರಳ ರಾಜ್ಯ ಬಸ್ ಮಾಲಕರ ಸಂಘ ನಿರ್ಧರಿಸಿದ್ದಾರೆ. ಮಂಜೇಶ್ವರ ತಾಲ್ಲೂಕು ಬಸ್ ಮಾಲಕರ ಸಂಘದ ಆಶ್ರಯದಲ್ಲಿ ಹೊಸಂಗಡಿಯಲ್ಲಿ ನಾಳೆ ಬೆಳಗ್ಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ರವರು ಸಂಚರಿಸುವ ಬಸ್ಸನ್ನೇರಿ ತಮ್ಮ ಕೈಯಿಂದ ಮೊದಲ ದೇಣಿಗೆ ಮೊತ್ತವನ್ನು ನೀಡುವ ಮಂಜೇಶ್ವರ ತಾಲ್ಲೂಕಿನ ಕಾರುಣ್ಯ ಯಾತ್ರೆಗೆ ಚಾಲನೆ ನೀಡಲಿರುವರು. ಈ ವೇಳೆ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೊಂತೆರೋ, ಸದಸ್ಯ ಆದರ್ಶ್ ಬಿ.ಎಂ,ರಾಧಾ ಕನಿಲ, ಕೇರಳ ವ್ಯಾಪಾರಿ ವ್ಯವಸಾಯ ಏಕೋಪನ ಸಮಿತಿಯ ಅಧ್ಯಕ್ಷ ಬಷೀರ್ ಕನಿಲ, ಕೇರಳ ಬಸ್ ಮಾಲಕರ ಸಂಘದ ಕಾಸರಗೋಡು ಜಿಲ್ಲಾ ಕೋಶಾಧಿಕಾರಿ ರಾಜೇಶ್ ಉದ್ಯಾವರ, ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘದ ಪದಾಧಿಕಾರಿಗಳು ಸೇರಿದಂತೆ, ವಿವಿಧ ಪಕ್ಷಗಳ ಮುಖಂಡರುಗಳು, ಧಾರ್ಮಿಕ, ಸಾಮಾಜಿಕ ಮುಖಂಡರುಗಳು ಉಪಸ್ಥಿತರಿರುವರು. ಬಾಯಾರುವಿನ ಕನಿಯಾಲದಲ್ಲಿ ಬೆಳಗ್ಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ
ಪೈವಳಿಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾಲಕ್ಷ್ಮಿ, ಸದಸ್ಯೆ ಶ್ರೀಮತಿ ಮಮತಾ ಪೂಜಾರಿ, ಕುವೆತ್ತೊಡಿಯ ವಿಷ್ಣು ಭಟ್, ಸುಬ್ರಹ್ಮಣ್ಯ ಮಾಸ್ಟರ್, ಒತ್ತರಬೈಲ್ ವಿನ ಅದ್ರಾಮ್ ಬ್ಯಾರಿ, ಕನಿಯಾಲದ ಅದಾಮ್, ರೆಡ್ ಸ್ಟಾರ್ ಕನಿಯಾಲದ ಹಸೈನಾರ್ ನಿಕ್ಕಿದ ಗುರಿ, ಪ್ರೆಂಡ್ಸ್ ಕನಿಯಾಲದ ಉದಯ ಗುತ್ತು, ಕನಿಯಾಲ ಶ್ರೀ ಶಾರದಾಂಬ ಭಜನಾ ಮಂಡಳಿಯ ಚಂದ್ರಶೇಖರ ಕಂಪದಮೂಲೆ ನೇತೃತ್ವ ನೀಡಲಿರುವರು.



